ರೋಮನ್ನರಿಗೆ ಬರೆದ ಪತ್ರ 5:1-21

  • ಕ್ರಿಸ್ತನ ಮೂಲಕ ದೇವರ ಜೊತೆ ಶಾಂತಿ ಸಂಬಂಧ (1-11)

  • ಆದಾಮನಿಂದ ಮರಣ, ಕ್ರಿಸ್ತನಿಂದ ಜೀವ (12-21)

    • ಪಾಪ ಮರಣ ಎಲ್ರಿಗೆ ಬಂತು (12)

    • ನೀತಿಯ ಒಂದು ಕ್ರಿಯೆ (18)

5  ನಮ್ಮ ನಂಬಿಕೆಯಿಂದಾಗಿ ದೇವರು ನಮ್ಮನ್ನ ನೀತಿವಂತರು ಅಂತ ನೋಡೋದ್ರಿಂದ+ ನಮ್ಮ ಪ್ರಭು ಯೇಸು ಕ್ರಿಸ್ತನ ಮೂಲಕ ನಾವು ದೇವರ ಜೊತೆ ಶಾಂತಿ ಸಂಬಂಧದಲ್ಲಿ* ಇರೋಣ.+  ಯೇಸು ಮೇಲೆ ನಾವು ನಂಬಿಕೆ ಇಟ್ಟಿರೋದ್ರಿಂದ ದೇವರ ಅಪಾರ ಕೃಪೆ ಪಡಿಯೋಕೆ ನಮಗೆ ದಾರಿ ತೆರೆದಿದೆ.+ ಆ ಕೃಪೆ ಈಗ ನಮಗೆ ಸಿಗ್ತಿದೆ. ದೇವರಿಂದ ಮಹಿಮೆಯನ್ನ ಪಡಿಯೋ ನಿರೀಕ್ಷೆ ನಮಗೆ ಇರೋದ್ರಿಂದ ನಾವು ಖುಷಿಪಡೋಣ.*  ಅಷ್ಟೇ ಅಲ್ಲ, ಕಷ್ಟಗಳು ಬಂದಾಗ ಖುಷಿಪಡೋಣ.*+ ಯಾಕಂದ್ರೆ ನಮಗೆ ಗೊತ್ತಿರೋ ಹಾಗೆ, ಕಷ್ಟದಲ್ಲಿ ಇರುವಾಗ ನಾವು ಸಹಿಸ್ಕೊಳ್ಳೋದನ್ನ ಕಲಿತೀವಿ.+  ಸಹಿಸ್ಕೊಂಡ್ರೆ ನಮ್ಮನ್ನ ದೇವರು ಮೆಚ್ತಾನೆ.+ ಆ ಮೆಚ್ಚುಗೆ ನಮಗೆ ನಿರೀಕ್ಷೆ ಕೊಡುತ್ತೆ.+  ನಿರೀಕ್ಷೆ ನಮ್ಮನ್ನ ನಿರಾಶೆ ಮಾಡಲ್ಲ.+ ಯಾಕಂದ್ರೆ ನಮಗೆ ಕೊಟ್ಟಿರೋ ಪವಿತ್ರಶಕ್ತಿಯಿಂದ ದೇವರು ತನ್ನ ಪ್ರೀತಿಯನ್ನ ನಮ್ಮ ಹೃದಯಗಳಲ್ಲಿ ಸುರಿದಿದ್ದಾನೆ.+  ನಮಗೆ ಬಲ ಇಲ್ಲದಿದ್ದಾಗ್ಲೇ*+ ಕ್ರಿಸ್ತನು, ಮುಂಚೆನೇ ನಿರ್ಧಾರವಾಗಿದ್ದ ಸಮಯದಲ್ಲಿ ಕೆಟ್ಟ ಜನ್ರಿಗಾಗಿ ಸತ್ತನು.  ನೀತಿವಂತನಿಗಾಗಿ ಒಬ್ಬನು ಸಾಯೋದು ಅಪರೂಪ. ಒಳ್ಳೆಯವನಿಗಾಗಿ ಒಬ್ಬನು ಸಾಯೋಕೆ ಮನಸ್ಸು ಮಾಡಿದ್ರೂ ಮಾಡಬಹುದು.  ಆದ್ರೆ ನಾವು ಪಾಪಿಗಳಾಗಿ ಇದ್ದಾಗ್ಲೇ ಕ್ರಿಸ್ತ ನಮಗೋಸ್ಕರ ಸತ್ತನು. ಇದ್ರಿಂದ ನಮ್ಮ ಮೇಲೆ ಎಷ್ಟೊಂದು ಪ್ರೀತಿ ಇದೆ ಅಂತ ದೇವರು ತೋರಿಸಿದ್ದಾನೆ.+  ಯೇಸುವಿನ ರಕ್ತದಿಂದ ದೇವರು ಈಗ ನಮ್ಮನ್ನ ನೀತಿವಂತರಾಗಿ ನೋಡ್ತಿದ್ದಾನೆ+ ಅನ್ನುವಾಗ ಆತನ ಮೂಲಕ ನಾವು ದೇವರ ಕೋಪದಿಂದ ತಪ್ಪಿಸ್ಕೊಳ್ತೀವಿ ಅನ್ನೋದು ಇನ್ನೂ ಪಕ್ಕಾ ಆಗುತ್ತೆ.+ 10  ನಾವು ದೇವರ ಶತ್ರುಗಳಾಗಿ ಇದ್ದಾಗ್ಲೇ ಆತನ ಮಗ ನಮಗಾಗಿ ಸತ್ತಿದ್ರಿಂದ ದೇವರ ಜೊತೆ ನಾವು ಶಾಂತಿ ಸಂಬಂಧಕ್ಕೆ ಬಂದ್ವಿ.+ ಅಂದ್ಮೇಲೆ ಈಗಾಗ್ಲೇ ದೇವರ ಜೊತೆ ಶಾಂತಿ ಸಂಬಂಧದಲ್ಲಿರೋ ನಾವು ದೇವರ ಮಗ ಜೀವಂತವಾಗಿ ಇರೋದ್ರಿಂದ ರಕ್ಷಣೆ ಪಡಿತೀವಿ ಅಂತ ಇನ್ನೂ ಜಾಸ್ತಿ ಭರವಸೆ ಇಡಬಹುದು. 11  ಅಷ್ಟೇ ಅಲ್ಲ, ದೇವರು ನಮ್ಮ ಪ್ರಭು ಯೇಸು ಕ್ರಿಸ್ತನ ಮೂಲಕ ಏನು ಮಾಡಿದ್ದಾನೋ ಅದಕ್ಕಾಗಿ ಖುಷಿಪಡ್ತೀವಿ. ಆತನ ಮೂಲಕ ನಮಗೀಗ ದೇವರ ಜೊತೆ ಶಾಂತಿ ಸಂಬಂಧ ಇದೆ.+ 12  ಒಬ್ಬ ಮನುಷ್ಯನಿಂದ ಪಾಪ ಲೋಕದೊಳಗೆ ಬಂತು, ಪಾಪದಿಂದ ಸಾವು ಬಂತು.+ ಎಲ್ಲ ಮನುಷ್ಯರು ಪಾಪಮಾಡಿದ್ರಿಂದ ಎಲ್ರೂ ಸಾಯ್ತಾರೆ.+ 13  ನಿಯಮ ಪುಸ್ತಕವನ್ನ ಕೊಡೋ ಮುಂಚೆನೇ ಲೋಕದಲ್ಲಿ ಪಾಪ ಇತ್ತು. ಆದ್ರೆ ನಿಯಮ ಪುಸ್ತಕ ಇಲ್ಲದಿದ್ದಾಗ ಯಾರ ಮೇಲೂ ಪಾಪದ ದೋಷ ಹೊರಿಸೋಕೆ ಆಗಲ್ಲ.+ 14  ಆದ್ರೂ ಸಾವು ಆದಾಮನ ಕಾಲದಿಂದ ಮೋಶೆ ಕಾಲದ ತನಕ ರಾಜನ ತರ ಆಳ್ವಿಕೆ ಮಾಡ್ತು. ಆದಾಮನ ಹಾಗೆ ಪಾಪ ಮಾಡದವ್ರ ಮೇಲೂ ಅದು ಆಳ್ವಿಕೆ ಮಾಡ್ತು. ಭವಿಷ್ಯದಲ್ಲಿ ಬರುತ್ತಿದ್ದವನ ತರಾನೇ ಆದಾಮ ಇದ್ದ.+ 15  ಆದ್ರೆ ದೇವರ ಉಡುಗೊರೆಗೂ ಆದಾಮನ ಪಾಪಕ್ಕೂ ವ್ಯತ್ಯಾಸ ಇದೆ. ಆ ಒಬ್ಬ ಮನುಷ್ಯನ ಪಾಪದಿಂದ ತುಂಬ ಜನ ಸತ್ರು. ಆದ್ರೆ ಒಬ್ಬ ಮನುಷ್ಯನ ಅಂದ್ರೆ ಯೇಸು ಕ್ರಿಸ್ತನ ಅಪಾರ ಕೃಪೆಯಿಂದ ತುಂಬ ಜನ+ ದೇವರ ಅಪಾರ ಕೃಪೆ ಮತ್ತು ಉಚಿತ ಉಡುಗೊರೆಯನ್ನ ಹೇರಳವಾಗಿ* ಪಡಿತಾರೆ!+ 16  ದೇವರ ಉಚಿತ ಉಡುಗೊರೆಗೆ ಮತ್ತು ಒಬ್ಬ ಮನುಷ್ಯನು ಮಾಡಿದ ಪಾಪಕ್ಕೆ ಇನ್ನೊಂದು ವ್ಯತ್ಯಾಸ ಇದೆ.+ ಅದೇನಂದ್ರೆ, ಒಬ್ಬನ ಪಾಪದಿಂದ ದೇವರು ಎಲ್ಲ ಜನ್ರನ್ನ ಅಪರಾಧಿಗಳು ಅಂತ ತೀರ್ಪು ಮಾಡಿದನು.+ ಆದ್ರೆ ತುಂಬ ಜನ ಪಾಪಮಾಡಿದ ಮೇಲೆ ದೇವರು ಕೊಟ್ಟ ಉಡುಗೊರೆಯಿಂದಾಗಿ ತುಂಬ ಜನ್ರನ್ನ ನೀತಿವಂತರು ಅಂತ ನೋಡಿದನು.+ 17  ಆ ಒಬ್ಬ ಮನುಷ್ಯನ ಪಾಪದಿಂದ ಸಾವು ರಾಜನ ತರ ಆಳ್ವಿಕೆ ಮಾಡ್ತು.+ ಹಾಗಿರುವಾಗ ದೇವರ ಅಪಾರ ಕೃಪೆಯನ್ನ ಮತ್ತು ನೀತಿ ಅನ್ನೋ ಉಚಿತ ಉಡುಗೊರೆ ಸಿಕ್ಕವರು+ ಒಬ್ಬನಿಂದ ಅಂದ್ರೆ ಯೇಸು ಕ್ರಿಸ್ತನಿಂದ ನಿಜವಾಗ್ಲೂ ಜೀವಿಸ್ತಾರೆ+ ಮತ್ತು ರಾಜರಾಗಿ ಆಳ್ತಾರೆ!+ 18  ಒಂದು ಪಾಪದಿಂದ ಹೇಗೆ ಎಲ್ಲ ಜನ್ರು ಅಪರಾಧಿಗಳು ಅಂತ ದೇವರು ತೀರ್ಪು ಮಾಡಿದ್ನೋ+ ಅದೇ ತರ ನೀತಿಯ ಒಂದು ಕೆಲಸದಿಂದ ದೇವರು ಎಲ್ಲ ರೀತಿಯ ಜನ್ರನ್ನ+ ನೀತಿವಂತರಾಗಿ ನೋಡ್ತಾನೆ. ಅವ್ರಿಗೆ ಜೀವ ಸಿಗುತ್ತೆ.+ 19  ಒಬ್ಬ ಮಾತು ಕೇಳದೆ ಇದ್ದಿದ್ರಿಂದ ತುಂಬ ಜನ ಪಾಪಿಗಳಾದ್ರು.+ ಹಾಗೇ ಒಬ್ಬ ಮಾತು ಕೇಳಿದ್ರಿಂದ ತುಂಬ ಜನ ನೀತಿವಂತರು ಆಗ್ತಾರೆ.+ 20  ಜನ್ರು ತುಂಬ ಪಾಪಿಗಳು ಅಂತ ತೋರಿಸೋಕೇ ದೇವರು ನಿಯಮ ಪುಸ್ತಕ ಕೊಟ್ಟನು.+ ಆದ್ರೆ ಜನ್ರ ಪಾಪ ಜಾಸ್ತಿ ಆಗ್ತಾ ಹೋದ ಹಾಗೆ ದೇವರು ಇನ್ನೂ ಹೆಚ್ಚು ಅಪಾರ ಕೃಪೆ ತೋರಿಸಿದನು. 21  ಪಾಪ ರಾಜನ ತರ ಆಳ್ವಿಕೆ ಮಾಡಿ ಸಾವನ್ನ ತಂತು.+ ಅದೇ ತರ ದೇವರ ಅಪಾರ ಕೃಪೆ ನೀತಿಯಿಂದ ರಾಜನ ತರ ಆಳ್ವಿಕೆಮಾಡಿ ನಮ್ಮ ಪ್ರಭು ಯೇಸು ಕ್ರಿಸ್ತನ ಮೂಲಕ ಶಾಶ್ವತ ಜೀವ ಸಿಗೋ ತರ ಮಾಡಿದೆ.+

ಪಾದಟಿಪ್ಪಣಿ

ಬಹುಶಃ, “ಸಂಬಂಧದಲ್ಲಿ ಇದ್ದೀವಿ.”
ಬಹುಶಃ, “ಖುಷಿಪಡ್ತೀವಿ.”
ಬಹುಶಃ, “ಖುಷಿಪಡ್ತೀವಿ.”
ಅಥವಾ “ಪಾಪಿಗಳಾಗಿ ಇದ್ದಾಗಲೇ.”
ಅಥವಾ “ತುಂಬಿತುಳುಕುವಷ್ಟು.”