ಮಾಹಿತಿ ಇರುವಲ್ಲಿ ಹೋಗಲು

ಯೇಸುವಿನ ಮರಣದ ಸ್ಮರಣೆಯನ್ನ ಯೆಹೋವನ ಸಾಕ್ಷಿಗಳು ಯಾಕೆ ಬೇರೆ ತರಾನೇ ಮಾಡ್ತಾರೆ?

ಯೇಸುವಿನ ಮರಣದ ಸ್ಮರಣೆಯನ್ನ ಯೆಹೋವನ ಸಾಕ್ಷಿಗಳು ಯಾಕೆ ಬೇರೆ ತರಾನೇ ಮಾಡ್ತಾರೆ?

 ‘ಯೇಸುವಿನ ಮರಣದ ಸ್ಮರಣೆಯನ್ನ’ ‘ಕರ್ತನ ಭೋಜನ’ ‘ಪ್ರಭು ಭೋಜನ,’ ಅಥವಾ ‘ಒಡೆಯನ ರಾತ್ರಿ ಊಟ’ ಅಂತಾನೂ ಕರೆಯುತ್ತಾರೆ. ಇದನ್ನ ಹೇಗೆ ಮಾಡಬೇಕು ಅಂತ ಬೈಬಲ್‌ ಹೇಳುತ್ತೋ ಅದೇ ತರ ನಾವು ಮಾಡುತ್ತೇವೆ. (1 ಕೊರಿಂಥ 11:20) ಇದನ್ನ ಬೇರೆಬೇರೆ ಪಂಗಡಗಳು ಬೇರೆಬೇರೆ ರೀತಿಯಲ್ಲಿ ಮಾಡುತ್ತವೆ. ಆದರೆ ಅವರು ಮಾಡುವ ವಿಧಾನಕ್ಕೆ, ನಂಬಿಕೆಗೆ ಬೈಬಲಲ್ಲಿ ಆಧಾರ ಇಲ್ಲ.

ಯೇಸು ಹೇಳಿದಂತೆ ಯಾಕೆ ಮಾಡಬೇಕು?

 ಯೇಸುವನ್ನ ನೆನಪಿಸಿಕೊಳ್ಳಲು, ಆತನು ನಮಗೋಸ್ಕರ ಮಾಡಿದ ಪ್ರಾಣತ್ಯಾಗಕ್ಕೆ ಕೃತಜ್ಞತೆ ತೋರಿಸಲು ನಾವು ಯೇಸುವಿನ ಮರಣದ ಸ್ಮರಣೆಯನ್ನ ಮಾಡುತ್ತೇವೆ. (ಮತ್ತಾಯ 20:28; 1 ಕೊರಿಂಥ 11:24) ನಾವು ಇದರಲ್ಲಿ ಯಾವುದೇ ತರದ ಧಾರ್ಮಿಕ ಸಂಸ್ಕಾರ (ಸಾಕ್ರಮೆಂಟ್‌) ಮಾಡುವುದಿಲ್ಲ. ಅಂದ್ರೆ ದೇವರ ಕೃಪೆಯನ್ನ ಅಥವಾ ಪಾಪಗಳ ಕ್ಷಮೆಯನ್ನ ಬೇಡುತ್ತಾ ಧಾರ್ಮಿಕ ವಿಧಿವಿಧಾನಗಳನ್ನ ನಡೆಸುವುದಿಲ್ಲ. a ಯೇಸುವಿನ ಮೇಲೆ ನಂಬಿಕೆ ಇಟ್ಟರೆ ಮಾತ್ರ ನಮ್ಮ ಪಾಪಗಳಿಗೆ ಕ್ಷಮೆ ಸಿಗುತ್ತೆ, ಧಾರ್ಮಿಕ ಆಚಾರಗಳಿಂದ ಕ್ಷಮೆ ಸಿಗಲ್ಲ ಅಂತ ಬೈಬಲ್‌ ಕಲಿಸುತ್ತೆ.—ರೋಮನ್ನರಿಗೆ 3:25; 1 ಯೋಹಾನ 2:1, 2.

ವರ್ಷದಲ್ಲಿ ಎಷ್ಟು ಸಲ ಮಾಡಬೇಕು?

 ಯೇಸು ಶಿಷ್ಯರಿಗೆ, ತನ್ನ ಮರಣದ ಸ್ಮರಣೆಯ ಕಾರ್ಯಕ್ರಮವನ್ನ ಮಾಡಬೇಕು ಅಂತ ಹೇಳಿದನು. ಆದರೆ ಇದನ್ನ ಮಾಡುವುದು ವರ್ಷಕ್ಕೆ ಒಂದು ಸಲನಾ, ತಿಂಗಳಿಗೆ ಒಂದು ಸಲನಾ, ವಾರಕ್ಕೆ ಒಂದು ಸಲನಾ ಅಂತ ಹೇಳಲಿಲ್ಲ. (ಲೂಕ 22:19) ಕೆಲವರು ತಿಂಗಳಿಗೆ ಒಂದು ಸಲ ಈ ಸ್ಮರಣೆಯ ಕಾರ್ಯಕ್ರಮವನ್ನ ಮಾಡಬೇಕು ಅಂತಾರೆ. ಇನ್ನೂ ಕೆಲವರು ವಾರಕ್ಕೆ ಒಂದು ಸಲ, ಪ್ರತಿ ದಿನ, ಒಂದು ದಿನಕ್ಕೆ ತುಂಬ ಸಲ, ನಮಗೆ ಎಷ್ಟು ಸಲ ಮಾಡಬೇಕು ಅಂತ ಅನಿಸುತ್ತೋ ಅಷ್ಟು ಸಲ ಈ ಕಾರ್ಯಕ್ರಮವನ್ನ ಮಾಡಬೇಕು ಅಂತ ಹೇಳ್ತಾರೆ. b ಆದರೆ ಗಮನಿಸಬೇಕಾದ ಕೆಲವು ವಿಷಯಗಳಿವೆ ನೋಡಿ.

 ಯೆಹೂದ್ಯರ ಪಸ್ಕ ಹಬ್ಬದ ದಿನಾನೇ ಯೇಸು ಮೊದಲನೇ ಸಲ ಒಡೆಯನ ರಾತ್ರಿ ಊಟದ ಕಾರ್ಯಕ್ರಮವನ್ನ ಮಾಡಿದನು. ಆ ದಿನ ಮುಗಿಯುವುದಕ್ಕೆ ಸ್ವಲ್ಪ ಮುಂಚೆ ಯೇಸು ತೀರಿಹೋದನು. (ಮತ್ತಾಯ 26:1, 2) ಇದೇನೂ ದಿಢೀರಂತ ಆಗಿದ್ದಲ್ಲ. ಯೇಸು ಮಾಡಿದ ಪ್ರಾಣತ್ಯಾಗವನ್ನ ಬೈಬಲ್‌ ಪಸ್ಕದ ಕುರಿಗೆ ಹೋಲಿಸುತ್ತೆ. (1 ಕೊರಿಂಥ 5:7, 8) ಇಸ್ರಾಯೇಲ್ಯರು ಪಸ್ಕ ಹಬ್ಬವನ್ನ ವರ್ಷದಲ್ಲಿ ಒಂದೇ ಸಲ ಆಚರಿಸುತ್ತಿದ್ದರು. (ವಿಮೋಚನಕಾಂಡ 12:1-6; ಯಾಜಕಕಾಂಡ 23:5) ಅದೇ ತರ ಆರಂಭದ ಕ್ರೈಸ್ತರು ಯೇಸುವಿನ ಮರಣದ ಸ್ಮರಣೆಯ ಕಾರ್ಯಕ್ರಮವನ್ನ ವರ್ಷದಲ್ಲಿ ಒಂದೇ ಸಲ ಮಾಡಿದ್ದರು. c ಹಾಗಾಗಿ ಯೆಹೋವನ ಸಾಕ್ಷಿಗಳು ಕೂಡ ಯೇಸುವಿನ ಮರಣದ ಸ್ಮರಣೆಯ ಕಾರ್ಯಕ್ರಮವನ್ನ ವರ್ಷದಲ್ಲಿ ಒಂದೇ ಸಲ ಮಾಡುತ್ತಾರೆ.

ಯಾವತ್ತು ಯಾವಾಗ ಮಾಡಬೇಕು?

 ಯೇಸು ಮೊದಲನೇ ಸಲ ಒಡೆಯನ ರಾತ್ರಿ ಊಟ ಮಾಡಿದ್ದು ನಾವು ಎಷ್ಟು ಸಲ ಸ್ಮರಣೆಯ ಕಾರ್ಯಕ್ರಮವನ್ನ ಮಾಡಬೇಕು ಅಂತ ತೋರಿಸುತ್ತೆ. ಅಷ್ಟೇ ಅಲ್ಲ, ಅದನ್ನ ಯಾವತ್ತು ಯಾವಾಗ ಮಾಡಬೇಕಂತ ಅರ್ಥ ಮಾಡಿಕೊಳ್ಳಲಿಕ್ಕೂ ಸಹಾಯ ಮಾಡುತ್ತೆ. ಯೆಹೂದ್ಯರು ಚಂದ್ರನ ಕ್ಯಾಲೆಂಡರನ್ನ ನೋಡುತ್ತಿದ್ದರು. ಅದರ ಪ್ರಕಾರ ಕ್ರಿ.ಶ. 33 ರ ನೈಸಾನ್‌ 14 ರಂದು ಸೂರ್ಯ ಮುಳುಗಿದ ಮೇಲೆ ಯೇಸು ಆ ವಿಶೇಷ ಸ್ಮರಣೆಯ ಕಾರ್ಯಕ್ರಮವನ್ನ ಮೊದಲ ಸಲ ಶುರು ಮಾಡಿದನು. (ಮತ್ತಾಯ 26:18-20, 26) ಆರಂಭದ ಕ್ರೈಸ್ತರು ಕೂಡ ಅದೇ ದಿನ ಕ್ರಿಸ್ತನ ಮರಣದ ಸ್ಮರಣೆಯನ್ನ ಮಾಡಿದರು. d ನಾವು ಕೂಡ ಪ್ರತಿ ವರ್ಷ ಅದೇ ದಿನ ಸ್ಮರಣೆಯನ್ನ ಮಾಡುತ್ತೇವೆ.

 ಕ್ರಿ.ಶ. 33 ರಲ್ಲಿ ನೈಸಾನ್‌ 14 ಶುಕ್ರವಾರ ಬಂದಿತ್ತು. ಆದರೆ ಪ್ರತಿ ವರ್ಷ ನೈಸಾನ್‌ 14 ಶುಕ್ರವಾರನೇ ಬರಲ್ಲ, ಬೇರೆಬೇರೆ ದಿನ ಬರುತ್ತೆ. ನಮ್ಮ ಕ್ಯಾಲೆಂಡರಲ್ಲಿ ನೈಸಾನ್‌ 14 ಯಾವತ್ತು ಬರುತ್ತೆ ಅಂತ ಲೆಕ್ಕಮಾಡೋಕೆ ನಾವು ಯೇಸುವಿನ ಕಾಲದಲ್ಲಿ ಬಳಸಿದ ವಿಧಾನವನ್ನೇ ಬಳಸುತ್ತೇವೆ. ಇವತ್ತಿನ ಯೆಹೂದಿ ಕ್ಯಾಲೆಂಡರಿಗಾಗಿ ಬಳಸುವ ವಿಧಾನವನ್ನ ಬಳಸಲ್ಲ. e

ರೊಟ್ಟಿ ಮತ್ತು ದ್ರಾಕ್ಷಾಮದ್ಯ

 ಯೇಸು ಪಸ್ಕದ ಊಟದಲ್ಲಿ ಮಿಕ್ಕಿದ್ದ ಹುಳಿಯಿಲ್ಲದ ರೊಟ್ಟಿಯನ್ನ, ಕೆಂಪು ದ್ರಾಕ್ಷಾಮದ್ಯವನ್ನ ತನ್ನ ಮರಣದ ಸ್ಮರಣೆಯ ಸಂದರ್ಭದಲ್ಲಿ ಬಳಸಿದನು. (ಮತ್ತಾಯ 26:26-28) ಅದೇ ರೀತಿ ನಾವು ಕೂಡ ಆ ಕಾರ್ಯಕ್ರಮದಲ್ಲಿ ಹುಳಿ ಅಥವಾ ಬೇರೆ ಯಾವುದನ್ನೂ ಬೆರೆಸಿರದ ರೊಟ್ಟಿಯನ್ನ ಮತ್ತು ಕೆಂಪು ದ್ರಾಕ್ಷಾಮದ್ಯವನ್ನ ಉಪಯೋಗಿಸುತ್ತೇವೆ. ಈ ದ್ರಾಕ್ಷಾಮದ್ಯದಲ್ಲಿ ಸಿಹಿ, ಬೇರೆ ಮದ್ಯ, ಮಸಾಲೆ ಪದಾರ್ಥ ಯಾವುದನ್ನೂ ಬೆರೆಸಿರುವುದಿಲ್ಲ.

 ಕೆಲವು ಕ್ರೈಸ್ತ ಪಂಗಡಗಳು ಹುಳಿ ಅಥವಾ ಈಸ್ಟ್‌ ಬೆರೆಸಿ ಮಾಡಿರುವ ರೊಟ್ಟಿಯನ್ನ ಈ ಕಾರ್ಯಕ್ರಮದಲ್ಲಿ ಬಳಸುತ್ತವೆ. ಆದರೆ ಬೈಬಲಿನಲ್ಲಿ ಹುಳಿ ಪಾಪ ಮತ್ತು ಭ್ರಷ್ಟತೆಯನ್ನ ಸೂಚಿಸುತ್ತೆ. (ಲೂಕ 12:1; 1 ಕೊರಿಂಥ 5:6-8; ಗಲಾತ್ಯ 5:7-9) ಕ್ರಿಸ್ತನ ಪಾಪವಿಲ್ಲದ ದೇಹವನ್ನ ಸೂಚಿಸೋಕೆ ಹುಳಿ ಅಥವಾ ಬೇರೆ ಏನನ್ನೂ ಬೆರೆಸಿರದ ರೊಟ್ಟಿಯನ್ನ ಬಳಸುವುದೇ ಸರಿ. (1 ಪೇತ್ರ 2:22) ಇನ್ನೊಂದು ವಿಷಯ ಏನೆಂದ್ರೆ, ಕೆಲವು ಚರ್ಚ್‌ಗಳು ಈ ಕಾರ್ಯಕ್ರಮದಲ್ಲಿ ದ್ರಾಕ್ಷಾಮದ್ಯಕ್ಕೆ ಬದಲಾಗಿ ತಾಜಾ ದ್ರಾಕ್ಷಿರಸವನ್ನ ಬಳಸುತ್ತವೆ. ಯಾಕೆಂದರೆ ದ್ರಾಕ್ಷಾಮದ್ಯವನ್ನ ಕುಡಿಯಲೇಬಾರದು ಅಂತ ಬೈಬಲಲ್ಲಿದೆ ಅನ್ನೋದು ಅವರ ವಾದ. ಆದರೆ ಬೈಬಲ್‌ ಹಾಗೆ ಹೇಳಲ್ಲ. (1 ತಿಮೊತಿ 5:23) ಹಾಗಾಗಿ ಕ್ರಿಸ್ತನ ಮರಣದ ಸ್ಮರಣೆಯಲ್ಲಿ ದ್ರಾಕ್ಷಾಮದ್ಯಕ್ಕೆ ಬದಲಾಗಿ ದ್ರಾಕ್ಷಿರಸವನ್ನ ಬಳಸುವುದು ಬೈಬಲ್‌ ಪ್ರಕಾರ ತಪ್ಪು.

ನಿಜವಾದ ದೇಹ ಮತ್ತು ರಕ್ತ ಅಲ್ಲ

 ಸ್ಮರಣೆಯಲ್ಲಿ ಬಳಸುವ ಹುಳಿಯಿಲ್ಲದ ರೊಟ್ಟಿ ಮತ್ತು ಕೆಂಪು ದ್ರಾಕ್ಷಾಮದ್ಯ ಕ್ರಿಸ್ತನ ದೇಹ ಮತ್ತು ರಕ್ತವನ್ನ ಸೂಚಿಸುವ ಸಂಕೇತಗಳಾಗಿರುತ್ತೆ. ಕೆಲವರು ನೆನಸುವ ಹಾಗೆ ರೊಟ್ಟಿ ಮತ್ತು ದ್ರಾಕ್ಷಾಮದ್ಯ ಅದ್ಭುತವಾಗಿ ಯೇಸುವಿನ ದೇಹ ಮತ್ತು ರಕ್ತವಾಗಿ ಬದಲಾಗುವುದಿಲ್ಲ. ಅಷ್ಟೇ ಅಲ್ಲ, ದ್ರಾಕ್ಷಾಮದ್ಯ ಯೇಸುವಿನ ರಕ್ತದ ಜೊತೆ ಆಗಲಿ, ರೊಟ್ಟಿ ಯೇಸುವಿನ ದೇಹದ ಜೊತೆ ಆಗಲಿ ಬೆರೆಯೋದಿಲ್ಲ. ಇದಕ್ಕೆ ಬೈಬಲಿನಲ್ಲಿ ಆಧಾರ ಇದೆ ನೋಡಿ.

  •   ಒಂದುವೇಳೆ ಯೇಸುನೇ ತನ್ನ ರಕ್ತ ಕುಡಿಯೋಕೆ ಶಿಷ್ಯರಿಗೆ ಹೇಳಿದ್ರೆ, ರಕ್ತ ತಿನ್ನಬಾರದು ಅಂತ ದೇವರು ಕೊಟ್ಟಿದ್ದ ನಿಯಮವನ್ನ ಮುರಿಯೋಕೆ ಹೇಳಿದ ಹಾಗೆ ಇರುತ್ತಿತ್ತು. (ಆದಿಕಾಂಡ 9:4; ಅಪೊಸ್ತಲರ ಕಾರ್ಯ 15:28, 29) ಹಾಗಾಗಿ ಯೇಸು ಖಂಡಿತ ಹಾಗೆ ಹೇಳಿರಲಿಕ್ಕಿಲ್ಲ. ಯಾಕೆಂದರೆ ರಕ್ತ ಪವಿತ್ರವಾದದ್ದು ಅಂತ ತೋರಿಸುವ ದೇವರ ನಿಯಮಗಳನ್ನ ಮುರಿಯೋಕೆ ಯೇಸು ಯಾರಿಗೂ ಯಾವತ್ತೂ ಹೇಳಿಕೊಡಲಿಲ್ಲ.—ಯೋಹಾನ 8:28, 29.

  •   ಅಪೊಸ್ತಲರು ಯೇಸುವಿನ ರಕ್ತವನ್ನೇ ಕುಡಿದಿದ್ರೆ ಯೇಸು, ‘ನನ್ನ ರಕ್ತವನ್ನ ಸುರಿಸ್ತೀನಿ’ ಅಂತ ಹೇಳುತ್ತಾ ಇರಲಿಲ್ಲ. ಯೇಸು ಹೇಳಿದ ಆ ಮಾತು ಆತನು ತನ್ನನ್ನ ಇನ್ನೂ ಬಲಿಯಾಗಿ ಕೊಟ್ಟಿಲ್ಲ, ಮುಂದೆ ಕೊಡಲಿಕ್ಕಿದ್ದಾನೆ ಅನ್ನೋದನ್ನ ಸೂಚಿಸುತ್ತೆ.—ಮತ್ತಾಯ 26:28.

  •   ಯೇಸು ತನ್ನನ್ನ ಬಲಿಯಾಗಿ ಅರ್ಪಿಸಿದ್ದು “ಒಂದೇ ಒಂದು ಸಲ.” (ಇಬ್ರಿಯ 9:25, 26) ಒಡೆಯನ ರಾತ್ರಿ ಊಟದ ಸಂದರ್ಭದಲ್ಲಿ ರೊಟ್ಟಿ ಮತ್ತು ದ್ರಾಕ್ಷಾಮದ್ಯ ಯೇಸುವಿನ ದೇಹ ಮತ್ತು ರಕ್ತವಾಗಿ ಬದಲಾಗೋದು ನಿಜ ಆಗಿದ್ರೆ ಅದನ್ನ ತಿಂದು ಕುಡಿಯೋರು ಆ ಬಲಿಯನ್ನ ಪದೇಪದೇ ಕೊಟ್ಟ ಹಾಗೆ ಇರುತ್ತೆ.

  •   ಯೇಸು “ನನ್ನನ್ನ ನೆನಪಿಸ್ಕೊಳ್ಳೋಕೆ ಇದನ್ನ ಮಾಡ್ತಾ ಇರಿ” ಅಂತ ಹೇಳಿದನೇ ಹೊರತು “ನನ್ನನ್ನ ಬಲಿಕೊಡೋದಕ್ಕೆ ಇದನ್ನ ಮಾಡ್ತಾ ಇರಿ” ಅಂತ ಹೇಳಲಿಲ್ಲ.—1 ಕೊರಿಂಥ 11:24.

 ರೊಟ್ಟಿ ಮತ್ತು ದ್ರಾಕ್ಷಾಮದ್ಯ ನಿಜವಾಗಲೂ ಯೇಸುವಿನ ದೇಹ ಮತ್ತು ರಕ್ತವಾಗಿ ಬದಲಾಯಿತು ಅಂತ ಜನ ನಂಬೋಕೆ ಕಾರಣ ಏನು? ಕೆಲವು ಬೈಬಲ್‌ ವಚನಗಳಲ್ಲಿ ಇರೋ ಪದಗಳಿಂದ ಅವರು ಹಾಗೆ ನಂಬುತ್ತಾರೆ. ಉದಾಹರಣೆಗೆ, “ಇದು ನನ್ನ ರಕ್ತ” ಅಂತ ಯೇಸು ಹೇಳಿದನು ಅಂತ ಅನೇಕ ಬೈಬಲ್‌ ಭಾಷಾಂತರಗಳಲ್ಲಿ ಇದೆ. (ಮತ್ತಾಯ 26:28) ಆದರೆ ಯೇಸು ಹೇಳಿದ್ದನ್ನ “ಇದು ನನ್ನ ರಕ್ತವನ್ನ ಸೂಚಿಸುತ್ತೆ” “ಇದು ನನ್ನ ರಕ್ತವನ್ನ ಪ್ರತಿನಿಧಿಸುತ್ತೆ” f ಅಂತಾನೂ ಭಾಷಾಂತರ ಮಾಡಬಹುದು. ಇಲ್ಲಿ ಯೇಸು ರೂಪಕಾಲಂಕಾರ ಉಪಯೋಗಿಸಿ ಕಲಿಸುತ್ತಿದ್ದನು. ಹೆಚ್ಚಾಗಿ ಯೇಸು ರೂಪಕಾಲಂಕಾರ ಬಳಸಿ ಕಲಿಸ್ತಾ ಇದ್ದನು.—ಮತ್ತಾಯ 13:34, 35.

ಯಾರು ತಿನ್ನುತ್ತಾರೆ?

 ಯೆಹೋವನ ಸಾಕ್ಷಿಗಳು ಯೇಸುವಿನ ಮರಣದ ಸ್ಮರಣೆಯ ಕಾರ್ಯಕ್ರಮವನ್ನ ಮಾಡುವಾಗ ಕೆಲವರಷ್ಟೇ ರೊಟ್ಟಿ ಮತ್ತು ದ್ರಾಕ್ಷಾಮದ್ಯವನ್ನ ತಗೊತಾರೆ. ಯಾಕೆ?

 ಯೇಸು ಸುರಿಸಿದ ರಕ್ತದ ಮೂಲಕ “ಒಂದು ಹೊಸ ಒಪ್ಪಂದ” ಮಾಡಲಾಯ್ತು. ಈ ಒಪ್ಪಂದ ಯೆಹೋವ ದೇವರು ಹಿಂದಿನ ಕಾಲದ ಇಸ್ರಾಯೇಲ್‌ ಜನಾಂಗದ ಜೊತೆ ಮಾಡಿದ್ದ ಒಪ್ಪಂದಕ್ಕೆ ಬದಲಿಯಾಗಿದೆ. (ಇಬ್ರಿಯ 8:10-13) ಈ ಹೊಸ ಒಪ್ಪಂದದಲ್ಲಿ ಇರುವವರು ರೊಟ್ಟಿ ಮತ್ತು ದ್ರಾಕ್ಷಾಮದ್ಯವನ್ನ ತಗೊತಾರೆ. ಈ ಹೊಸ ಒಪ್ಪಂದದಲ್ಲಿ ಎಲ್ಲ ಕ್ರೈಸ್ತರು ಇಲ್ಲ, ವಿಶೇಷ ರೀತಿಯಲ್ಲಿ “ದೇವರು ಯಾರನ್ನೆಲ್ಲ ಕರೆದಿದ್ದಾನೋ” ಅವರು ಮಾತ್ರ ಇದ್ದಾರೆ. (ಇಬ್ರಿಯ 9:15; ಲೂಕ 22:20) ಇವರು ಸ್ವರ್ಗದಲ್ಲಿ ಕ್ರಿಸ್ತನ ಜೊತೆ ರಾಜರಾಗಿ ಆಳುತ್ತಾರೆ. ಈ ಅದ್ಭುತ ಅವಕಾಶ 1,44,000 ಜನರಿಗೆ ಮಾತ್ರ ಇದೆ ಅಂತ ಬೈಬಲ್‌ ತಿಳಿಸುತ್ತೆ.—ಲೂಕ 22:28-30; ಪ್ರಕಟನೆ 5:9, 10; 14:1, 3.

 ಕ್ರಿಸ್ತನ ಜೊತೆ ರಾಜರಾಗಿ ಆಳೋಕೆ ದೇವರು ಯಾರನ್ನೆಲ್ಲ ಕರೆದಿದ್ದಾನೋ ಅವರು ಚಿಕ್ಕ ಹಿಂಡಾಗಿದ್ದಾರೆ. ಆದರೆ ಹೆಚ್ಚಿನ ‘ಜನ ಒಂದು ದೊಡ್ಡ ಗುಂಪಿನಲ್ಲಿ’ ಇದ್ದಾರೆ. ಇವರು ಭೂಮಿಯಲ್ಲಿ ಶಾಶ್ವತವಾಗಿ ಜೀವಿಸುತ್ತಾರೆ. (ಲೂಕ 12:32; ಪ್ರಕಟನೆ 7:9, 10) ಭೂಮಿಯ ಮೇಲೆ ಜೀವಿಸುವ ನಿರೀಕ್ಷೆ ಇರುವ ನಾವೆಲ್ಲ ಯೇಸುವಿನ ಮರಣದ ಸ್ಮರಣೆಯಲ್ಲಿ ರೊಟ್ಟಿ ಮತ್ತು ದ್ರಾಕ್ಷಾಮದ್ಯವನ್ನ ತಗೊಳೋದಿಲ್ಲ. ನಮಗೋಸ್ಕರ ಯೇಸು ಮಾಡಿದ ತ್ಯಾಗಕ್ಕಾಗಿ ಕೃತಜ್ಞತೆ ತೋರಿಸೋಕೆ ಸ್ಮರಣೆಗೆ ಹಾಜರಾಗುತ್ತೇವೆ.—1 ಯೋಹಾನ 2:2.

a “ಸಾಕ್ರಮೆಂಟ್‌ ಪದ ಹೊಸ ಒಡಂಬಡಿಕೆಯಲ್ಲಿ ಎಲ್ಲೂ ಇಲ್ಲ. μυστήριον [ಮಿಸ್ಟೀರಿಯನ್‌] ಅನ್ನೋ ಗ್ರೀಕ್‌ ಪದವನ್ನ ದೀಕ್ಷಾಸ್ನಾನಕ್ಕಾಗಲಿ ಕರ್ತನ ಭೋಜನಕ್ಕಾಗಲಿ ಯಾವುದೇ ಆಚರಣೆಗಾಗಲಿ ಉಪಯೋಗಿಸಿಲ್ಲ” ಅಂತ ಮೆಕ್ಲಿಂಟಕ್‌ ಹಾಗೂ ಸ್ಟ್ರಾಂಗ್‌ರವರ ಸೈಕ್ಲಪೀಡೀಯ ಸಂಪುಟ 9, ಪುಟ 212 ಹೇಳುತ್ತೆ.

b ಒಡೆಯನ ರಾತ್ರಿ ಊಟದ ಬಗ್ಗೆ ಹೇಳುವಾಗ ಕೆಲವು ಬೈಬಲ್‌ ಭಾಷಾಂತರಗಳು “ಆಗಾಗ” ಅನ್ನೋ ಪದವನ್ನ ಉಪಯೋಗಿಸುತ್ತವೆ. ಕೆಲವರು ಈ ಪದವನ್ನ ಹಿಡಿದುಕೊಂಡು ಈ ಕಾರ್ಯಕ್ರಮವನ್ನ ಎಷ್ಟು ಸಲ ಮಾಡಬೇಕಂತ ತೋರಿಸುತ್ತೆ ಅಂತ ಅರ್ಥಮಾಡಿಕೊಂಡಿದ್ದಾರೆ. ಆದರೆ ಮೂಲಭಾಷೆಯಲ್ಲಿ ಆ ಪದಕ್ಕಿರುವ ಸರಿಯಾದ ಅರ್ಥ ‘ಮಾಡುವಾಗೆಲ್ಲ’ ಅನ್ನೋದಾಗಿದೆ.—1 ಕೊರಿಂಥ 11:25, 26 ಸತ್ಯವೇದವು.

c ದ ನ್ಯೂ ಶ್ಯಾಫ್‌-ಹರ್‌ಜ಼ೋಗ್‌ ಎನ್‌ಸೈಕ್ಲಪೀಡೀಯ ಆಫ್‌ ರಿಲೀಜಿಯಸ್‌ ನಾಲೆಜ್‌, ಸಂಪುಟ 4, ಪುಟ 43-44, ಮತ್ತು ಮೆಕ್ಲಿಂಟಕ್‌ ಹಾಗೂ ಸ್ಟ್ರಾಂಗ್‌ರವರ ಸೈಕ್ಲಪೀಡೀಯ ಸಂಪುಟ 8, ಪುಟ 836 ನೋಡಿ.

d ದ ನ್ಯೂ ಕೇಂಬ್ರಿಡ್ಜ್‌ ಹಿಸ್ಟರಿ ಆಫ್‌ ದ ಬೈಬಲ್‌, ಸಂಪುಟ 1, ಪುಟ 841.

e ಇವತ್ತಿನ ಯೆಹೂದಿ ಕ್ಯಾಲೆಂಡರ್‌ ಪ್ರಕಾರ ನೈಸಾನ್‌ ತಿಂಗಳು ಅಮಾವಾಸ್ಯೆಯ ದಿನದಿಂದ ಶುರುವಾಗುತ್ತೆ. ಆದರೆ ಒಂದನೇ ಶತಮಾನದಲ್ಲಿ ಈ ವಿಧಾನವನ್ನ ಉಪಯೋಗಿಸಲಿಲ್ಲ. ಯೆರೂಸಲೇಮಿನಲ್ಲಿ ಅಮಾವಾಸ್ಯೆಯ ನಂತರ ಚಂದ್ರ ಮೊದಲನೇ ಸಲ ಕಾಣಿಸಿಕೊಂಡಾಗ ನೈಸಾನ್‌ ತಿಂಗಳು ಶುರುವಾಗಿದೆ ಅಂತ ಲೆಕ್ಕ ಮಾಡುತ್ತಿದ್ದರು. ಇದು ಅಮಾವಾಸ್ಯೆ ನಂತರ ಒಂದು ಅಥವಾ ಎರಡು ದಿನ ಆದಮೇಲೆ ಬರುತ್ತಿತ್ತು. ಹಾಗಾಗಿ ಇವತ್ತು ಯೆಹೂದ್ಯರು ಪಸ್ಕ ಹಬ್ಬ ಆಚರಿಸುವ ತಾರೀಖು ಮತ್ತು ಯೆಹೋವನ ಸಾಕ್ಷಿಗಳು ಕ್ರಿಸ್ತನ ಮರಣದ ಸ್ಮರಣೆಯ ಕಾರ್ಯಕ್ರಮವನ್ನ ಮಾಡುವ ತಾರೀಖು ಯಾವಾಗಲೂ ಒಂದೇ ಆಗಿರುವುದಿಲ್ಲ.

f ಜೇಮ್ಸ್‌ ಮೊಫಾಟ್‌ರವರ ಎ ನ್ಯೂ ಟ್ರಾನ್ಸ್‌ಲೇಷನ್‌ ಆಫ್‌ ದ ಬೈಬಲ್‌; ಚಾರ್ಲ್ಸ್‌ ಬಿ. ವಿಲಿಯಮ್ಸ್‌ರವರ ದ ನ್ಯೂ ಟೆಸ್ಟಮೆಂಟ್‌—ಎ ಟ್ರಾನ್ಸ್‌ಲೇಷನ್‌ ಇನ್‌ ದ ಲಾನ್‌ಗ್ವೇಜ್‌ ಆಫ್‌ ದ ಪೀಪಲ್‌; ಹಗ್‌ ಜೆ. ಸ್ಕಾನ್‌ಫೀಲ್ಡ್‌ರವರ ದ ಒರಿಜಿನಲ್‌ ನ್ಯೂ ಟೆಸ್ಟಮೆಂಟ್‌.