ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ ಹದಿನಾರು

ವಿವೇಕ, ಧೈರ್ಯ, ನಿಸ್ವಾರ್ಥದಿಂದ ಕ್ರಮಗೈದಾಕೆ

ವಿವೇಕ, ಧೈರ್ಯ, ನಿಸ್ವಾರ್ಥದಿಂದ ಕ್ರಮಗೈದಾಕೆ

1-3. (1) ಗಂಡನ ಸಿಂಹಾಸನದತ್ತ ಹೆಜ್ಜೆಯಿಡುತ್ತಿದ್ದಾಗ ಎಸ್ತೇರಳಿಗೆ ಹೇಗನಿಸಿರಬೇಕು? (2) ಎಸ್ತೇರಳು ಆಸ್ಥಾನಕ್ಕೆ ಬಂದಾಗ ರಾಜ ಹೇಗೆ ಪ್ರತಿಕ್ರಿಯಿಸಿದನು?

ಎಸ್ತೇರ್‌ ಆ ದೊಡ್ಡ ಆಸ್ಥಾನದೊಳಗೆ ಕಾಲಿಟ್ಟಳು. ಅವಳ ಹೃದಯ ಒಂದೇ ಸಮನೆ ಬಡಿದುಕೊಳ್ಳುತ್ತಾ ಇತ್ತು. ಸಿಂಹಾಸನದತ್ತ ಅವಳು ಮೆಲ್ಲ ಮೆಲ್ಲನೆ ಹೆಜ್ಜೆಹಾಕುತ್ತಿದ್ದಂತೆ ಆಸ್ಥಾನದಲ್ಲಿ ತಟ್ಟನೆ ಮೌನ ಆವರಿಸಿತು. ಸೂಜಿ ಬಿದ್ದರೂ ಕೇಳಿಸುವಷ್ಟು ಮೌನ. ಆಕೆಗೆ ತನ್ನ ಸ್ವಂತ ಹೆಜ್ಜೆಯ ಸದ್ದು ಹಾಗೂ ತನ್ನ ವೈಭವಯುತ ವಸ್ತ್ರಗಳ ಸರಪರ ಸದ್ದು ಕಿವಿಗೆ ಬೀಳುತ್ತಿತ್ತು. ಆಸ್ಥಾನದ ಭವ್ಯತೆ, ಸ್ತಂಭಗಳ ಸೌಂದರ್ಯ, ಲೆಬನೋನಿನ ದೇವದಾರು ಮರದಿಂದ ನಿರ್ಮಿತವಾದ ಚಾವಣಿ, ಅದರಲ್ಲಿದ್ದ ಸೂಕ್ಷ್ಮ ಕೆತ್ತನೆ ಕೆಲಸದ ಸೊಬಗನ್ನು ಆಸ್ವಾದಿಸಲು ಎಸ್ತೇರ್‌ ಅತ್ತಿತ್ತ ನೋಡುವ ಸಮಯ ಅದಾಗಿರಲಿಲ್ಲ. ಆಕೆಯ ಗಮನ, ಮನಸ್ಸೆಲ್ಲ ಸಿಂಹಾಸನದಲ್ಲಿ ಕೂತಿದ್ದವನ ಮೇಲಿತ್ತು. ಅವಳ ಸಾವು ಬದುಕು ಈಗ ಅವನ ಕೈಯಲ್ಲಿತ್ತು.

2 ಹತ್ತಿರ ಬರುತ್ತಿದ್ದ ಎಸ್ತೇರಳನ್ನು ಎವೆಯಿಕ್ಕದೆ ನೋಡುತ್ತ ರಾಜ ಆಕೆಯತ್ತ ತನ್ನ ಸುವರ್ಣದಂಡ ಚಾಚಿದ. ಇದೊಂದು ಚಿಕ್ಕ ಸನ್ನೆ. ಆದರೆ ಅದರಿಂದಲೇ ಅವಳ ಜೀವ ಉಳಿಯಿತು. ಅಪ್ಪಣೆಯಾಗದೆ ಅವನ ಸನ್ನಿಧಿಗೆ ಬಂದ ಆಕೆಯನ್ನು ರಾಜ ಕ್ಷಮಿಸಿದ್ದಾನೆಂದು ಆ ಸನ್ನೆ ತೋರಿಸುತ್ತಿತ್ತು. ಎಸ್ತೇರ್‌ ಹತ್ತಿರ ಬಂದು ಕೈಚಾಚಿ, ಕೃತಜ್ಞತಾಭಾವದಿಂದ ಸುವರ್ಣದಂಡದ ತುದಿಯನ್ನು ಮುಟ್ಟಿದಳು.—ಎಸ್ತೇ. 5:1, 2.

ರಾಜನು ತೋರಿಸಿದ ಕರುಣೆಗೆ ಎಸ್ತೇರ್‌ ಕೃತಜ್ಞತೆ ಸೂಚಿಸಿದಳು

3 ರಾಜ ಅಹಷ್ವೇರೋಷನನ್ನು ನೋಡಿದಾಕ್ಷಣ ಅವನಲ್ಲಿ ಅಪಾರ ಧನಸಂಪತ್ತು, ಶಕ್ತಿಸಾಮರ್ಥ್ಯ ಇತ್ತೆಂದು ಗೊತ್ತಾಗುತ್ತಿತ್ತು. ಆ ಕಾಲದ ಪರ್ಷಿಯದ ಸಾಮ್ರಾಟರು ತೊಡುತ್ತಿದ್ದ ಉಡುಗೆ ನೂರಾರು ಮಿಲಿಯ ಡಾಲರಿಗೆ ಸಮಾನವಾದ ಬೆಲೆಯದ್ದೆಂದು ಹೇಳಲಾಗುತ್ತದೆ. ಅಷ್ಟು ದೊಡ್ಡ ರಾಜನಾಗಿದ್ದರೂ ಅವನಿಗೆ ಪತ್ನಿ ಎಸ್ತೇರಳ ಮೇಲೆ ಪ್ರೀತಿಯಿತ್ತು. ಎಸ್ತೇರಳಿಗೆ ಆ ಪ್ರೀತಿ ಅವನ ಕಣ್ಣುಗಳಲ್ಲಿ ಕಾಣುತ್ತಿತ್ತು. ಅವನದನ್ನು ತನ್ನದೇ ಆದ ರೀತಿಯಲ್ಲಿ ತೋರಿಸುತ್ತಿದ್ದ. ಈಗ ಅವನು ಅವಳಿಗೆ, “ಎಸ್ತೇರ್‌ ರಾಣಿಯೇ, ನಿನಗೇನು ಬೇಕು? ನಿನ್ನ ವಿಜ್ಞಾಪನೆ ಯಾವದು? ನನ್ನ ಅರ್ಧರಾಜ್ಯವನ್ನು ಕೇಳಿದರೂ ನಿನಗೆ ಕೊಡುತ್ತೇನೆ” ಎಂದು ಹೇಳಿದನು.—ಎಸ್ತೇ. 5:3.

4. ಎಸ್ತೇರಳ ಮುಂದೆ ಇನ್ಯಾವ ಸವಾಲುಗಳಿದ್ದವು?

4 ಎಸ್ತೇರ್‌ ಅಸಾಧಾರಣ ನಂಬಿಕೆ ಧೈರ್ಯ ತೋರಿಸುತ್ತಾ, ಸ್ವಜನರನ್ನು ಮುಗಿಸುವ ಸಂಚನ್ನು ಬಯಲಿಗೆಳೆದು ಅವರನ್ನು ರಕ್ಷಿಸಲಿಕ್ಕಾಗಿ ಈಗ ರಾಜನ ಮುಂದೆ ಬಂದು ನಿಂತಿದ್ದಳು. ಇಲ್ಲಿ ತನಕ ಯಶಸ್ವಿಯಾದಳು ನಿಜ. ಆದರೆ ಮುಂದಕ್ಕೆ ಇದಕ್ಕಿಂತ ದೊಡ್ಡ ಸವಾಲುಗಳನ್ನು ಎದುರಿಸಲಿಕ್ಕಿದ್ದಳು. ಅದೇನೆಂದರೆ, ತುಂಬ ಸ್ವಾಭಿಮಾನವುಳ್ಳ ಈ ಸಾಮ್ರಾಟನಿಗೆ ಅವನ ನೆಚ್ಚಿನ ಸಲಹೆಗಾರ ಮಹಾ ದುಷ್ಟನೆಂದೂ ರಾಜನಿಗೆ ಮೋಸಮಾಡಿ ಎಸ್ತೇರಳ ಜನರ ಮೇಲೆ ಮರಣದಂಡನೆ ವಿಧಿಸುವ ಹಾಗೆ ಮಾಡಿದ್ದಾನೆಂದು ಆಕೆ ಮನವರಿಕೆ ಮಾಡಿಸಬೇಕಿತ್ತು. ಇದನ್ನು ಹೇಗೆ ಮಾಡುವಳು? ಅವಳ ನಂಬಿಕೆಯಿಂದ ನಾವೇನು ಕಲಿಯಬಲ್ಲೆವು?

“ಮಾತಾಡುವ ಸಮಯ”ವನ್ನು ವಿವೇಕದಿಂದ ಆಯ್ಕೆಮಾಡಿದಳು

5, 6. (1) ಪ್ರಸಂಗಿ 3:1, 7 ರಲ್ಲಿರುವ ಸೂತ್ರವನ್ನು ಎಸ್ತೇರ್‌ ಹೇಗೆ ಅನ್ವಯಿಸಿಕೊಂಡಳು? (2) ಎಸ್ತೇರ್‌ ತನ್ನ ಗಂಡನೊಟ್ಟಿಗೆ ಹೇಗೆ ವಿವೇಕಯುತವಾಗಿ ಮಾತಾಡಿದಳು?

5 ಎಸ್ತೇರ್‌ ಅಲ್ಲೇ ಆಸ್ಥಾನದಲ್ಲಿ ಎಲ್ಲರ ಸಮ್ಮುಖದಲ್ಲಿ ರಾಜನಿಗೆ ಸಮಸ್ಯೆಯನ್ನು ಬಿಚ್ಚಿಡಲಿಲ್ಲ. ಹಾಗೆ ಮಾಡಿರುತ್ತಿದ್ದರೆ ಗಂಡನಿಗೆ ಅವಮಾನ ಮಾಡಿದಂತಾಗುತ್ತಿತ್ತು. ಅಲ್ಲದೆ ಹಾಮಾನನ ಬಗ್ಗೆ ಅವಳು ಏನೇ ಹೇಳಿರುತ್ತಿದ್ದರೂ ಅದು ತಪ್ಪೆಂದು ವಾದಿಸಲು ಅವನಿಗೆ ಸಮಯಾವಕಾಶವೂ ಸಿಗುತ್ತಿತ್ತು. ಆದ್ದರಿಂದ ಎಸ್ತೇರ್‌ ಏನು ಮಾಡಿದಳು? “ಪ್ರತಿಯೊಂದು ಕಾರ್ಯಕ್ಕೂ ಕಾಲವು ಕ್ಲುಪ್ತವಾಗಿದೆ; . . . ಸುಮ್ಮನಿರುವ ಸಮಯ, ಮಾತಾಡುವ ಸಮಯ” ಇದೆಯೆಂದು ವಿವೇಕಿ ರಾಜ ಸೊಲೊಮೋನ ದೇವಪ್ರೇರಣೆಯಿಂದ ಬರೆದಿದ್ದ ಮಾತನ್ನು ಪಾಲಿಸಿದಳು. (ಪ್ರಸಂ. 3:1, 7) ಇಂಥ ಸೂತ್ರಗಳನ್ನು ಎಸ್ತೇರಳ ಸಾಕುತಂದೆಯಾದ ನಂಬಿಗಸ್ತ ವ್ಯಕ್ತಿ ಮೊರ್ದೆಕೈ ತನ್ನ ಮನೆಯಲ್ಲಿ ಬೆಳೆಯುತ್ತಿದ್ದ ಅವಳಿಗೆ ಕಲಿಸಿದ್ದಿರಬಹುದು. ಹಾಗಾಗಿ ‘ಮಾತಾಡುವ ಸಮಯವನ್ನು’ ಜಾಗ್ರತೆಯಿಂದ ಆರಿಸಿಕೊಳ್ಳುವುದರ ಮಹತ್ವ ಆಕೆಗೆ ಚೆನ್ನಾಗಿ ತಿಳಿದಿತ್ತು.

6 ಆಕೆ ರಾಜನಿಗೆ ಹೀಗಂದಳು: “ಅರಸರ ಚಿತ್ತಕ್ಕೆ ಬಂದರೆ ನಾನು ಈಹೊತ್ತು ತಮಗೋಸ್ಕರ ಸಿದ್ಧಮಾಡಿಸಿರುವ ಔತಣಕ್ಕೆ ಹಾಮಾನನೊಡನೆ ಬರೋಣವಾಗಲಿ.” (ಎಸ್ತೇ. 5:4) ರಾಜ ಇದಕ್ಕೊಪ್ಪಿದನು, ಹಾಮಾನನನ್ನೂ ಕರೆಕಳುಹಿಸಿದನು. ಎಸ್ತೇರ್‌ ಎಷ್ಟು ವಿವೇಕಯುತವಾಗಿ ಮಾತಾಡಿದಳೆಂದು ಗಮನಿಸಿದಿರಾ? ಗಂಡನ ಮಾನಮರ್ಯಾದೆ ಕಾಪಾಡಿದಳು. ಹಾಗೆಯೇ ತನಗಿರುವ ಚಿಂತೆಗಳನ್ನು ಅವನಿಗೆ ಹೇಳಲು ಹೆಚ್ಚು ಸೂಕ್ತವಾದ ಸಮಯ ಹಾಗೂ ಸ್ಥಳವನ್ನು ಗೊತ್ತುಮಾಡಿದಳು.—ಜ್ಞಾನೋಕ್ತಿ 10:19 ಓದಿ.

7, 8. (1) ಎಸ್ತೇರಳು ಮೊದಲನೇ ದಿನ ಏರ್ಪಡಿಸಿದ್ದ ಔತಣ ಹೇಗಿತ್ತು? (2) ರಾಜನಿಗೆ ತನ್ನ ಕೋರಿಕೆಯನ್ನು ತಿಳಿಸುವುದನ್ನು ಅವಳು ಯಾಕೆ ಮುಂದೂಡುತ್ತಿದ್ದಳು?

7 ಎಸ್ತೇರಳು ಆ ಔತಣದ ತಯಾರಿಯಲ್ಲಿ ತುಂಬ ಮುತುವರ್ಜಿ ವಹಿಸಿದ್ದರಲ್ಲಿ ಸಂದೇಹವಿಲ್ಲ. ಪ್ರತಿಯೊಂದೂ ತನ್ನ ಗಂಡನ ಇಷ್ಟದ ಪ್ರಕಾರ ಇರುವಂತೆ ಆಕೆಯೇ ಮುಂದೆ ನಿಂತು ಎಲ್ಲವನ್ನೂ ಏರ್ಪಡಿಸಿರಬೇಕು. ಉಲ್ಲಾಸಕ್ಕಾಗಿ ಶ್ರೇಷ್ಠ ಗುಣಮಟ್ಟದ ದ್ರಾಕ್ಷಾಮದ್ಯವೂ ಔತಣದಲ್ಲಿತ್ತು. (ಕೀರ್ತ. 104:15) ಅಹಷ್ವೇರೋಷನು ಆ ಔತಣದಲ್ಲಿ ತುಂಬ ಆನಂದಿಸಿದನು. ಎಷ್ಟೆಂದರೆ ಎಸ್ತೇರಳ ಕೋರಿಕೆ ಏನಾಗಿತ್ತೆಂದು ಪುನಃ ಕೇಳಿದನು. ಅವಳು ಈಗ ಅದನ್ನು ಹೇಳುವ ಸಮಯ ಬಂದಿತ್ತೇ?

8 ಇದು ಸರಿಯಾದ ಸಮಯ ಅಲ್ಲವೆಂದು ಎಸ್ತೇರಳಿಗೆ ಅನಿಸಿತು. ಅವಳು ರಾಜನನ್ನೂ ಹಾಮಾನನನ್ನೂ ಇನ್ನೊಂದು ಔತಣಕ್ಕೆ ಮರುದಿನ ಬರಲು ಆಮಂತ್ರಿಸಿದಳು. (ಎಸ್ತೇ. 5:7, 8) ಅವಳು ತನ್ನ ಕೋರಿಕೆಯನ್ನು ತಿಳಿಸುವುದನ್ನು ಯಾಕೆ ಮುಂದೂಡುತ್ತಿದ್ದಳು? ನೆನಪಿಡಿ, ಹಾಮಾನನು ರಾಜನ ಅನುಮತಿಯಿಂದ ಹೊರಡಿಸಿದ ಆಜ್ಞೆ ಮೇರೆಗೆ ಎಸ್ತೇರಳ ಸ್ವಜನರೆಲ್ಲರ ಸಂಹಾರ ಆಗಲಿಕ್ಕಿತ್ತು. ಒಂದುವೇಳೆ ಎಸ್ತೇರಳು ಮಾತಾಡುವ ಸಮಯ ಸೂಕ್ತವಾಗಿರದಿದ್ದರೆ ಎಷ್ಟೋ ಜನರು ಜೀವ ಕಳಕೊಳ್ಳಲಿದ್ದರು. ಆದ್ದರಿಂದಲೇ ಕಾದಳು. ತನ್ನ ಗಂಡನನ್ನು ಎಷ್ಟು ಮಾನ್ಯಮಾಡುತ್ತೇನೆಂದು ತೋರಿಸಲಿಕ್ಕಾಗಿ ಇದರಿಂದ ಅವಳಿಗೆ ಮತ್ತೊಂದು ಅವಕಾಶ ಸಿಕ್ಕಿತು.

9. (1) ತಾಳ್ಮೆ ಏಕೆ ಬೇಕು? (2) ತಾಳ್ಮೆ ತೋರಿಸುವ ವಿಷಯದಲ್ಲಿ ಎಸ್ತೇರಳನ್ನು ಹೇಗೆ ಅನುಕರಿಸಬಲ್ಲೆವು?

9 ತಾಳ್ಮೆ ಅಮೂಲ್ಯವಾದ ಗುಣ. ಅಪರೂಪವೂ ಹೌದು. ತನ್ನ ಜನರನ್ನು ನೆನಸಿ ಎಸ್ತೇರ್‌ ಒಳಗೊಳಗೆ ತುಂಬ ಸಂಕಟಪಡುತ್ತಿದ್ದಳು. ತನ್ನ ಚಿಂತೆಯನ್ನು ಹೇಳಿಬಿಡಲು ಮನಸ್ಸು ತುಂಬ ತುಡಿಯುತ್ತಿತ್ತು. ಆದರೂ ಅದನ್ನು ಹೇಳಲು ಸರಿಯಾದ ಸಮಯಕ್ಕಾಗಿ ಕಾದಳು. ಆಕೆಯ ಮಾದರಿಯಿಂದ ನಾವು ಬಹಳಷ್ಟನ್ನು ಕಲಿಯಬಹುದು. ಒಂದು ತಪ್ಪು ನಡೆಯುತ್ತಿರುವುದನ್ನು ನೋಡಿದಾಗ ಅದನ್ನು ಸರಿಪಡಿಸುವುದರ ಬಗ್ಗೆ ಅಧಿಕಾರದ ಸ್ಥಾನದಲ್ಲಿರುವ ವ್ಯಕ್ತಿಗೆ ಮನಗಾಣಿಸಬೇಕಾದಲ್ಲಿ ನಾವು ಎಸ್ತೇರಳಂತೆ ತಾಳ್ಮೆ ತೋರಿಸಬೇಕು. “ದೀರ್ಘಶಾಂತಿಯಿಂದ [ತಾಳ್ಮೆಯಿಂದ, NW] ಪ್ರಭುವನ್ನೂ ಸಮ್ಮತಿಪಡಿಸಬಹುದು; ಮೃದುವಚನವು ಎಲುಬನ್ನು ಮುರಿಯುವದು” ಎನ್ನುತ್ತದೆ ಜ್ಞಾನೋಕ್ತಿ 25:15. ನಾವು ಎಸ್ತೇರಳಂತೆ ಸರಿಯಾದ ಸಮಯಕ್ಕಾಗಿ ತಾಳ್ಮೆಯಿಂದ ಕಾದು, ಸೌಮ್ಯ ರೀತಿಯಲ್ಲಿ ಮಾತಾಡಿದರೆ ಎಲುಬಿನಷ್ಟು ಗಡುಸಾದ ವಿರೋಧಿಯ ಮನಸ್ಸನ್ನೂ ಒಪ್ಪಿಸಲು ಸಾಧ್ಯವಾಗಬಹುದು. ಎಸ್ತೇರಳ ದೇವರಾದ ಯೆಹೋವನು ಆಕೆ ತಾಳ್ಮೆಯಿಂದ, ವಿವೇಕದಿಂದ ನಡೆದುಕೊಂಡದ್ದಕ್ಕಾಗಿ ಆಕೆಯನ್ನು ಹರಸಿದನೊ?

ತಾಳ್ಮೆಯು ನ್ಯಾಯದ ಬಾಗಿಲನ್ನು ತೆರೆಯಿತು

10, 11. (1) ಮೊದಲ ದಿನ ಔತಣ ಮುಗಿಸಿ ಹೊರಟ ನಂತರ ಹಾಮಾನನ ಮನಸ್ಥಿತಿ ಏಕೆ ಬದಲಾಯಿತು? (2) ಅವನ ಹೆಂಡತಿ ಹಾಗೂ ಆಪ್ತರು ಯಾವ ಸಲಹೆಕೊಟ್ಟರು?

10 ಎಸ್ತೇರಳು ತಾಳ್ಮೆ ತೋರಿಸಿದ್ದರಿಂದ ಮುಂದೆ ಅಸಾಧಾರಣವಾದ ಘಟನೆಗಳು ನಡೆದವು. ಮೊದಲ ದಿನದ ಔತಣ ಮುಗಿಸಿ ಹಾಮಾನನು “ಆನಂದಲಹರಿಯಲ್ಲಿ” ಮನೆಗೆ ಹೊರಟನು ಎನ್ನುತ್ತದೆ ಬೈಬಲ್‌. ಬೇರಾರಿಗೂ ಕೊಟ್ಟಿರದ ಈ ಸನ್ಮಾನವನ್ನು ರಾಜ ರಾಣಿ ತನಗೆ ಕೊಟ್ಟಿದ್ದಾರೆಂದು ಬೀಗುತ್ತಿದ್ದನು. ಆದರೆ ಅವನು ಅರಮನೆಯ ಹೆಬ್ಬಾಗಿಲನ್ನು ದಾಟಿಹೋಗುತ್ತಿದ್ದಾಗ ಅವನ ದೃಷ್ಟಿ ಯೆಹೂದ್ಯನಾದ ಮೊರ್ದೆಕೈ ಮೇಲೆ ಬಿತ್ತು. ಈಗಲೂ ಅವನು ಹಾಮಾನನಿಗೆ ಬಗ್ಗಿ ನಮಸ್ಕರಿಸಲಿಲ್ಲ. ಹಿಂದಿನ ಅಧ್ಯಾಯದಲ್ಲಿ ನೋಡಿದಂತೆ, ಮೊರ್ದೆಕೈ ಹೀಗೆ ಮಾಡುತ್ತಿದ್ದದ್ದು ಅಗೌರವ ತೋರಿಸಲಿಕ್ಕಲ್ಲ ಬದಲಾಗಿ ತನ್ನ ಮನಸ್ಸಾಕ್ಷಿಯನ್ನು ಶುದ್ಧವಾಗಿಟ್ಟುಕೊಳ್ಳಲು ಹಾಗೂ ಯೆಹೋವ ದೇವರೊಂದಿಗಿನ ತನ್ನ ಸಂಬಂಧವನ್ನು ಕಾಪಾಡಿಕೊಳ್ಳಲು. ಆದರೆ ಹಾಮಾನನು “ಅವನ ಮೇಲೆ ಕೋಪಭರಿತನಾದನು.”—ಎಸ್ತೇ. 5:9.

11 ಹಾಮಾನನು ಮನೆಗೆ ಹೋಗಿ ತನ್ನ ಹೆಂಡತಿ ಹಾಗೂ ಆಪ್ತರಿಗೆ ತನಗೆ ಮೊರ್ದೆಕೈ ಮಾಡಿದ ಅವಮಾನದ ಬಗ್ಗೆ ಹೇಳಿದನು. ಆಗ ಅವರು 72 ಅಡಿ ಎತ್ತರದ ಗಲ್ಲುಗಂಬವನ್ನು ತಯಾರಿಸಿ, ರಾಜನ ಅಪ್ಪಣೆ ಪಡೆದು ಮೊರ್ದೆಕೈಯನ್ನು ಅದರಲ್ಲಿ ನೇತುಹಾಕಬೇಕೆಂದು ಹಾಮಾನನಿಗೆ ಸಲಹೆಕೊಟ್ಟರು. ಅವನಿಗೆ ಈ ಸಲಹೆ ಇಷ್ಟವಾಗಿ ಕೂಡಲೇ ಗಲ್ಲುಗಂಬ ಸಿದ್ಧಮಾಡಲು ಅಪ್ಪಣೆಕೊಟ್ಟನು.—ಎಸ್ತೇ. 5:12-14.

12. (1) ಆಸ್ಥಾನದ ದಾಖಲೆಗಳಿಂದ ಓದಿಹೇಳುವಂತೆ ರಾಜ ಹೇಳಿದ್ದೇಕೆ? (2) ಅದರಿಂದ ಅವನಿಗೆ ಏನು ತಿಳಿದುಬಂತು?

12 ಇತ್ತ ಅರಮನೆಯಲ್ಲಿದ್ದ ರಾಜನಿಗಾದರೊ ಆ ರಾತ್ರಿ ಎಂದಿನಂತಿರಲಿಲ್ಲ. “ಆ ರಾತ್ರಿಯಲ್ಲಿ ಅರಸನಿಗೆ ನಿದ್ರೆಬರಲಿಲ್ಲ” ಎನ್ನುತ್ತದೆ ಬೈಬಲ್‌. ಆದ್ದರಿಂದ ಆಸ್ಥಾನದ ದಾಖಲೆಗಳನ್ನು ತರಿಸಿ ಅದರಿಂದ ಓದಿಹೇಳಬೇಕೆಂದು ಆದೇಶ ನೀಡಿದನು. ಹಿಂದೊಮ್ಮೆ ರಾಜನ ಹತ್ಯೆಗಾಗಿ ನಡೆಸಲಾದ ಸಂಚಿನ ವಿವರ ಆ ದಾಖಲೆಗಳಲ್ಲಿತ್ತು. ಆಗ ರಾಜನಿಗೆ ಆ ಸಂಚುಗಾರರನ್ನು ಹಿಡಿದು ಹತಿಸಲಾದದ್ದು, ಸಂಚನ್ನು ಬಯಲುಪಡಿಸಿದವನು ಮೊರ್ದೆಕೈ ಎನ್ನುವುದು ನೆನಪಿಗೆ ಬಂತು. ತಟ್ಟನೆ ಏನೋ ಹೊಳೆದಂತಾಗಿ ಮೊರ್ದೆಕೈಗೆ ಯಾವ ಪ್ರತಿಫಲ ಕೊಡಲಾಯಿತೆಂದು ಕೇಳಿದನು. ಯಾವ ಪ್ರತಿಫಲವನ್ನೂ ಕೊಡಲಾಗಿಲ್ಲ ಎಂಬ ಉತ್ತರ ಸಿಕ್ಕಿತು.—ಎಸ್ತೇರಳು 6:1-3 ಓದಿ.

13, 14. (1) ಹಾಮಾನನ ಯೋಜನೆಗಳು ತಲೆಕೆಳಗಾಗಲು ಆರಂಭವಾದದ್ದು ಹೇಗೆ? (2) ಅವನ ಪತ್ನಿ ಮತ್ತು ಆಪ್ತರು ಏನಂದರು?

13 ಇದರಿಂದ ರಾಜ ಚಿಂತಿತನಾದನು. ತಮ್ಮ ಕಡೆಯಿಂದಾದ ಈ ತಪ್ಪನ್ನು ತಿದ್ದಲಿಕ್ಕೆ ಆಸ್ಥಾನದ ಅಧಿಕಾರಿಗಳು ಯಾರಾದರೂ ಪ್ರಾಕಾರದಲ್ಲಿದ್ದಾರಾ ಎಂದು ಕೇಳಿದನು. ಹಾಮಾನನೇ ಅಲ್ಲಿ ಇರಬೇಕಾ?! ಮೊರ್ದೆಕೈಯನ್ನು ಹತಿಸಲಿಕ್ಕಾಗಿ ಅನುಮತಿ ಕೇಳಬೇಕೆಂಬ ಆತುರದಿಂದ ರಾಜನ ಆಸ್ಥಾನಕ್ಕೆ ಬೆಳ್ಳಂಬೆಳಗ್ಗೆ ಬಂದಿದ್ದ. ಆದರೆ ಅವನು ಈ ಬಗ್ಗೆ ಬಾಯಿ ತೆರೆಯುವ ಮುಂಚೆಯೇ ರಾಜ ತನ್ನ ಅನುಗ್ರಹಕ್ಕೆ ಪಾತ್ರನಾದವನಿಗೆ ಹೇಗೆ ಸನ್ಮಾನಮಾಡಬೇಕೆನ್ನುತ್ತೀ ಎಂದು ಸಲಹೆ ಕೇಳಿದನು. ರಾಜನ ಮನಸ್ಸಿನಲ್ಲಿರುವುದು ತಾನೇ ಎಂದು ಹಾಮಾನ ನೆನಸಿ, ಆ ವ್ಯಕ್ತಿಗೆ ತುಂಬ ಆಡಂಬರದಿಂದ ಹೇಗೆಲ್ಲ ಸನ್ಮಾನಿಸಬೇಕೆಂದು ವಿವರಿಸಲು ಶುರುಮಾಡಿದ. ಅವನಿಗೆ ರಾಜವಸ್ತ್ರಗಳನ್ನು ಹಾಕಿಸಬೇಕು, ರಾಜನ ಕುದುರೆ ಮೇಲೆ ಕೂರಿಸಬೇಕು, ಅರಸನ ಉನ್ನತ ಅಧಿಕಾರಿಯೊಬ್ಬನು ಶೂಷನ್‌ನಲ್ಲೆಲ್ಲಾ ಅವನ ಮೆರವಣಿಗೆ ಮಾಡಿಸಿ, ಕುದುರೆ ಮುಂದೆ ಹೋಗುತ್ತಾ ಎಲ್ಲರಿಗೂ ಕೇಳುವ ಹಾಗೆ ಗಟ್ಟಿಯಾಗಿ ಅವನ ಗುಣಗಾನ ಮಾಡಬೇಕೆಂದು ಹೇಳಿದ. ಆದರೆ ಸನ್ಮಾನಿಸಬೇಕಾದ ವ್ಯಕ್ತಿ ಬೇರ್ಯಾರೂ ಅಲ್ಲ ಮೊರ್ದೆಕೈ ಅಂತ ಹಾಮಾನನಿಗೆ ಗೊತ್ತಾದಾಗ ಅವನ ಮುಖ ವಿವರ್ಣ ಆದದ್ದನ್ನು ಸ್ವಲ್ಪ ಊಹಿಸಿ! ಮೊರ್ದೆಕೈಯ ಗುಣಗಾನ ಮಾಡುವ ಕೆಲಸವನ್ನು ರಾಜನು ಯಾರಿಗೆ ವಹಿಸಿದನು? ಹಾಮಾನನಿಗೇ!!—ಎಸ್ತೇ. 6:4-10.

14 ಅವನಿಗೆ ಜುಗುಪ್ಸೆಯಾದರೂ ಈ ಕೆಲಸವನ್ನು ಮನಸ್ಸಿಲ್ಲದ ಮನಸ್ಸಿನಿಂದ ಮಾಡಿ ಮುಗಿಸಿದ. ಸಂಕಟ ತಾಳಲಾರದೆ ಮನೆಗೆ ಓಡಿದ. ಅವನ ಪತ್ನಿ ಮತ್ತು ಆಪ್ತರೆಲ್ಲರೂ ಇದೆಲ್ಲ ಕೇಡಿನ ಸೂಚನೆ, ಯೆಹೂದ್ಯನಾದ ಮೊರ್ದೆಕೈ ವಿರುದ್ಧದ ಹೋರಾಟದಲ್ಲಿ ಹಾಮಾನನಿಗೆ ಸೋಲು ಖಂಡಿತ ಎಂದು ಹೇಳಿದರು.—ಎಸ್ತೇ. 6:12, 13.

15. (1) ಎಸ್ತೇರಳು ತಾಳ್ಮೆ ತೋರಿಸಿದ್ದರ ಫಲಿತಾಂಶ ಏನಾಯಿತು? (2) ನಾವು ‘ಕಾದುಕೊಳ್ಳುವುದು’ ವಿವೇಕಯುತವೇಕೆ?

15 ಎಸ್ತೇರ್‌ ತಾಳ್ಮೆ ತೋರಿಸಿ ರಾಜನ ಮುಂದೆ ತನ್ನ ಕೋರಿಕೆ ತಿಳಿಸಲಿಕ್ಕೆ ಇನ್ನೊಂದು ದಿನದ ಮಟ್ಟಿಗೆ ಕಾದದ್ದು ಒಳ್ಳೇದೇ ಆಯಿತು. ಏಕೆಂದರೆ ಹಾಮಾನನು ತನ್ನ ಗೋರಿಯನ್ನು ತಾನೇ ತೋಡಿಕೊಳ್ಳಲಾರಂಭಿಸಿದ್ದ. ಅಲ್ಲದೆ, ರಾಜನಿಗೆ ಆ ರಾತ್ರಿ ನಿದ್ದೆ ಬರದ ಹಾಗೆ ಮಾಡಿದ್ದು ಯೆಹೋವ ದೇವರೇ ಆಗಿರಬಹುದು. (ಜ್ಞಾನೋ. 21:1) ದೇವರ ವಾಕ್ಯವು ನಮಗೆ ‘ಕಾದುಕೊಳ್ಳುವಂತೆ’ ಪ್ರೋತ್ಸಾಹಿಸುವುದು ನಮ್ಮ ಒಳಿತಿಗೇ. (ಮೀಕ 7:7 ಓದಿ.) ನಮಗೆ ಸಮಸ್ಯೆಗಳಿರುವಾಗ ಅವನ್ನು ಪರಿಹರಿಸಲು ನಾವು ದೇವರಲ್ಲಿ ಭರವಸೆಯಿಟ್ಟು ಆತನು ಕ್ರಮಗೈಯುವಂತೆ ಕಾಯಬೇಕು. ಆತನದನ್ನು ಪರಿಹರಿಸುವ ವಿಧವು ಎಷ್ಟೋ ಶ್ರೇಷ್ಠವಾಗಿರುತ್ತದೆ. ಒಂದುವೇಳೆ ನಾವಾಗಿಯೇ ಅದನ್ನು ಪರಿಹರಿಸಲು ಹೆಜ್ಜೆ ತಕ್ಕೊಂಡಿರುತ್ತಿದ್ದರೆ ಅದು ಅಷ್ಟು ಉತ್ತಮವಾಗಿರುತ್ತಿರಲಿಲ್ಲ ಎಂದು ನಮಗೆ ಗೊತ್ತಾಗುವುದು.

ಹೇಳಬೇಕಾದದ್ದನ್ನು ಧೈರ್ಯದಿಂದ ಹೇಳಿಬಿಟ್ಟಳು

16, 17. (1) ಎಸ್ತೇರಳಿಗೆ “ಮಾತಾಡುವ ಸಮಯ” ಯಾವಾಗ ಬಂತು? (2) ಎಸ್ತೇರ್‌ ವಷ್ಟಿಯಂತಿರಲಿಲ್ಲ ಹೇಗೆ?

16 ರಾಜನ ತಾಳ್ಮೆಯನ್ನು ಇನ್ನಷ್ಟು ಪರೀಕ್ಷಿಸುವುದು ಉಚಿತವಲ್ಲವೆಂದು ಎಸ್ತೇರಳಿಗನಿಸಿತು. ಎರಡನೇ ದಿನದ ಔತಣದಲ್ಲಿ ರಾಜನಿಗೆ ಎಲ್ಲವನ್ನು ಮುಚ್ಚುಮರೆಯಿಲ್ಲದೆ ಹೇಳಲು ನಿರ್ಧರಿಸಿದಳು. ಆದರೆ ಹೇಳುವುದು ಹೇಗೆ? ಆ ಔತಣದಲ್ಲಿ ರಾಜನು ಪುನಃ ಒಮ್ಮೆ ಅವಳ ಕೋರಿಕೆ ಏನೆಂದು ಕೇಳಿ ಅವಳಿಗೆ ಮಾತಾಡುವ ಅವಕಾಶ ಕೊಟ್ಟನು. (ಎಸ್ತೇ. 7:2) ಕೊನೆಗೂ ಎಸ್ತೇರಳಿಗೆ “ಮಾತಾಡುವ ಸಮಯ” ಬಂತು.

17 ಮೊದಲು ಅವಳು ಮನಸ್ಸಲ್ಲೇ ದೇವರಿಗೆ ಪ್ರಾರ್ಥಿಸಿರಬಹುದು. ಅನಂತರ, “ಅರಸನು ನನ್ನ ಮೇಲೆ ಕಟಾಕ್ಷವಿಟ್ಟು ಸಮ್ಮತಿಸುವದಾದರೆ ನನ್ನ ವಿಜ್ಞಾಪನೆಯನ್ನೂ ಪ್ರಾರ್ಥನೆಯನ್ನೂ ಲಾಲಿಸಿ ನನ್ನ ಜೀವವನ್ನೂ ಜನಾಂಗವನ್ನೂ ಉಳಿಯಗೊಡಿಸಬೇಕು” ಎಂದು ರಾಜನಿಗೆ ಹೇಳಿದಳು. (ಎಸ್ತೇ. 7:3) ಅವಳು ರಾಜನೊಟ್ಟಿಗೆ ಮಾತಾಡಿದ ರೀತಿ ಗಮನಿಸಿ. ಅವಳು ಹೇಳಲಿರುವ ವಿಷಯದಲ್ಲಿ ರಾಜನು ಯಾವುದೇ ತೀರ್ಮಾನ ತಕ್ಕೊಂಡರೂ ಅದನ್ನು ಗೌರವಿಸುತ್ತಾಳೆಂದು ಅದು ತೋರಿಸಿತು. ರಾಜನನ್ನು ಉದ್ದೇಶಪೂರ್ವಕವಾಗಿ ಅವಮಾನಿಸಿದ್ದ ಅವನ ಮಾಜಿ ಪತ್ನಿ ವಷ್ಟಿಯಂತೆ ಎಸ್ತೇರ್‌ ಇರಲಿಲ್ಲ. (ಎಸ್ತೇ. 1:10-12) ಅಲ್ಲದೆ, ರಾಜನು ಹಾಮಾನನಲ್ಲಿ ಭರವಸೆಯಿಟ್ಟದ್ದು ಮೂರ್ಖತನವಾಗಿತ್ತೆಂದು ಅವಳು ಟೀಕಿಸಲಿಲ್ಲ. ಬದಲಿಗೆ, ತನ್ನ ಜೀವಕ್ಕೆ ಬಂದಿರುವ ಅಪಾಯದಿಂದ ತನ್ನನ್ನು ರಕ್ಷಿಸುವಂತೆ ರಾಜನ ಬಳಿ ಅಂಗಲಾಚಿದಳು.

18. ಎಸ್ತೇರಳು ರಾಜನ ಮುಂದೆ ಸಮಸ್ಯೆಯನ್ನು ಬಿಡಿಸಿಟ್ಟದ್ದು ಹೇಗೆ?

18 ರಾಣಿಯ ವಿನಂತಿ ರಾಜನ ಮನಕಲಕಿತು. ತನ್ನ ಪತ್ನಿಯ ಜೀವಕ್ಕೆ ಕುತ್ತು ತರುವಷ್ಟು ಧೈರ್ಯ ಯಾರು ಮಾಡಿರಬಹುದೆಂದು ಚಕಿತನೂ ಆದ. ಎಸ್ತೇರ್‌ ಮಾತು ಮುಂದುವರಿಸುತ್ತಾ, “ಜನರು ನಮ್ಮನ್ನು ಕೊಂದು ಸಂಹರಿಸಿ ನಿರ್ನಾಮಗೊಳಿಸುವ ಹಾಗೆ ನನ್ನನ್ನೂ ನನ್ನ ಜನರನ್ನೂ ಮಾರಲಾಗಿದೆ. ಬರೇ ದಾಸದಾಸಿಯರಾಗುವದಕ್ಕೆ ಮಾರಲ್ಪಟ್ಟಿದ್ದರೆ ಸುಮ್ಮನಿರುತ್ತಿದ್ದೆ. ಆದರೆ ಈಗ ಬಂದೊದಗಿರುವ ಆಪತ್ತಿನಿಂದ ರಾಜನಿಗೇ ಹಾನಿ ಆಗಲಿದೆ” ಎಂದು ಹೇಳಿದಳು. (ಎಸ್ತೇ. 7:4, NW) ಸಮಸ್ಯೆಯನ್ನು ಎಸ್ತೇರಳು ಮುಚ್ಚುಮರೆಯಿಲ್ಲದೆ ಹೇಳಿದ್ದನ್ನು ಗಮನಿಸಿ. ಆದರೆ ಅದೇ ಸಮಯದಲ್ಲಿ ಅವಳದನ್ನು ಹೇಳುತ್ತಿರುವುದಕ್ಕೆ ಕಾರಣವನ್ನೂ ವಿವರಿಸಿದಳು. ಅದೇನೆಂದರೆ ತನ್ನನ್ನೂ ತನ್ನ ಜನರನ್ನೂ ದಾಸತ್ವಕ್ಕೆ ಒಳಪಡಿಸುವ ಬೆದರಿಕೆ ಮಾತ್ರ ಆಗಿರುತ್ತಿದ್ದರೆ ಸುಮ್ಮನಿರುತ್ತಿದ್ದೆ, ಆದರೆ ಈ ಮಾರಣಹೋಮದಿಂದ ರಾಜನಿಗೇ ದೊಡ್ಡ ನಷ್ಟ ಆಗಲಿದೆ ಎಂದಳು.

19. ಒಡಂಬಡಿಸುವ ಕಲೆ ಬಗ್ಗೆ ಎಸ್ತೇರಳಿಂದ ಏನು ಕಲಿಯಬಲ್ಲೆವು?

19 ಒಂದು ವಿಷಯದ ಬಗ್ಗೆ ಒಬ್ಬರನ್ನು ಒಡಂಬಡಿಸುವುದು ಹೇಗೆಂಬುದನ್ನು ಎಸ್ತೇರಳ ಮಾದರಿಯಿಂದ ಕಲಿಯಬಲ್ಲೆವು. ಒಡಂಬಡಿಸುವುದು ಒಂದು ಕಲೆ. ಗಂಭೀರ ಸಮಸ್ಯೆಯೊಂದರ ಬಗ್ಗೆ ಕ್ರಮ ತಕ್ಕೊಳ್ಳುವಂತೆ ನಮ್ಮ ಆತ್ಮೀಯರೊಬ್ಬರಿಗೊ ಅಧಿಕಾರದಲ್ಲಿರುವ ವ್ಯಕ್ತಿಗೊ ತಿಳಿಸಬೇಕಾಗಿ ಬಂದರೆ ಅದನ್ನು ತಾಳ್ಮೆಯಿಂದ, ಗೌರವದಿಂದ, ಮುಚ್ಚುಮರೆಯಿಲ್ಲದೆ ಹೇಳುವುದೇ ಸರಿಯಾದ ವಿಧಾನ.—ಜ್ಞಾನೋ. 16:21, 23.

20, 21. (1) ಎಸ್ತೇರಳು ಹಾಮಾನನನ್ನು ಬಯಲಿಗೆಳೆದದ್ದು ಹೇಗೆ? (2) ರಾಜನ ಪ್ರತಿಕ್ರಿಯೆ ಏನಾಗಿತ್ತು? (3) ಹಾಮಾನ ಸಂಚುಗಾರ, ಹೇಡಿ ಎಂಬುದು ಬಯಲಾದಾಗ ಅವನೇನು ಮಾಡಿದ?

20 “ಇಂಥ ದುಷ್ಕೃತ್ಯದ ಮೇಲೆ ಮನಸ್ಸಿಟ್ಟವನು ಯಾವನು?” ಎಂದು ಅಬ್ಬರಿಸಿದ ಅಹಷ್ವೇರೋಷ. “ನಮ್ಮನ್ನು ಬಾಧಿಸಬೇಕೆಂದಿರುವ ಹಗೆಗಾರನು ಈ ದುಷ್ಟ ಹಾಮಾನನೇ” ಎನ್ನುತ್ತಾ ಎಸ್ತೇರಳು ಅವನೆಡೆಗೆ ಬೊಟ್ಟುಮಾಡುವುದನ್ನು ಊಹಿಸಿ. ಆ ಗಂಭೀರ ಆರೋಪಕ್ಕೆ ಪ್ರತಿಕ್ರಿಯೆ ಏನಾಗಿತ್ತು? ಹಾಮಾನನಿಗಂತೂ ಉಸಿರೇ ನಿಂತು ಹೋದಂತಾಯಿತು. ಮೊದಲೇ ಚಿಕ್ಕಚಿಕ್ಕ ಕಾರಣಕ್ಕೆಲ್ಲ ಸಿಡಿದೇಳುತ್ತಿದ್ದ ಈ ಅರಸ ಆ ಮಾತು ಕೇಳಿದೊಡನೆ ಅವನ ಮುಖ ಸಿಟ್ಟಿನಿಂದ ಕೆಂಪಾಗುವುದನ್ನು ಸ್ವಲ್ಪ ಊಹಿಸಿ. ತನ್ನ ಮುದ್ದಿನ ಮಡದಿಯನ್ನು ಸಾಯಿಸುವ ಆಜ್ಞೆಯನ್ನು ಮೋಸದಿಂದ ತನ್ನಿಂದ ಹೊರಡಿಸಿದವನು ತನ್ನ ನೆಚ್ಚಿನ ಸಲಹೆಗಾರನೇ ಎಂದು ತಿಳಿದಾಗ ರಾಜನಿಗೆ ಹೇಗಾಗಿರಬೇಕು? ತನ್ನ ಕೋಪವನ್ನು ಹತ್ತಿಕ್ಕಲು ರಾಜ ಅಲ್ಲಿಂದೆದ್ದು ಅರಮನೆಯ ತೋಟಕ್ಕೆ ಹೋದನು.—ಎಸ್ತೇ. 7:5-7.

ಹಾಮಾನನು ದುಷ್ಟನೆಂದು ಎಸ್ತೇರ್‌ ಧೈರ್ಯದಿಂದ ತೋರಿಸಿಕೊಟ್ಟಳು

21 ಹಾಮಾನನು ಸಂಚುಗಾರ, ಹೇಡಿ ಎಂಬುದು ಬಯಲಾಯಿತು. ಅವನು ಎಸ್ತೇರಳ ಕಾಲಿಗೆ ಬಿದ್ದು ತನಗೆ ದಯೆತೋರಿಸುವಂತೆ ಬೇಡಿದ. ರಾಜ ಕೋಣೆಯೊಳಗೆ ವಾಪಸ್ಸು ಬಂದಾಗ, ಹಾಮಾನನು ಎಸ್ತೇರಳ ಮಂಚದ ಮೇಲೆ ಬಿದ್ದು ಅವಳಲ್ಲಿ ಬೇಡಿಕೊಳ್ಳುತ್ತಿರುವುದನ್ನು ನೋಡಿದನು. ತನ್ನ ಮನೆಯಲ್ಲೇ, ತನ್ನ ಮುಂದೆಯೇ ರಾಣಿಯ ಮಾನಭಂಗ ಮಾಡುತ್ತಿದ್ದಾನೆಂದು ರಾಜನು ಸಿಟ್ಟಿನಿಂದ ಹಾಮಾನನನ್ನು ದೂಷಿಸಿದನು. ಈ ಮಾತು ಹಾಮಾನನಿಗೆ ಮರಣಘಂಟೆ ಬಾರಿಸಿದಂತಿತ್ತು. ಸೇವಕರು ಬಂದು ಅವನ ಮುಖಕ್ಕೆ ಮುಸುಕು ಹಾಕಿ ಅಲ್ಲಿಂದ ಕರೆದೊಯ್ದರು. ಆಗ ರಾಜನ ಅಧಿಕಾರಿಗಳಲ್ಲೊಬ್ಬನು ಮೊರ್ದೆಕೈಗಾಗಿ ಹಾಮಾನ ದೊಡ್ಡ ಗಲ್ಲುಗಂಬ ಸಿದ್ಧಮಾಡಿಟ್ಟಿದ್ದಾನೆಂದು ಬಾಯಿಬಿಟ್ಟನು. ಅದೇ ಕಂಬದಲ್ಲಿ ಹಾಮಾನನನ್ನು ನೇತು ಹಾಕಬೇಕೆಂದು ಅಹಷ್ವೇರೋಷ ತಕ್ಷಣ ಅಪ್ಪಣೆಕೊಟ್ಟನು.—ಎಸ್ತೇ. 7:8-10.

22. ನಾವು ಹತಾಶರಾಗದಂತೆ, ಸಿನಿಕರಾಗದಂತೆ, ನಂಬಿಕೆ ಕಳಕೊಳ್ಳದಂತೆ ಎಸ್ತೇರಳ ಮಾದರಿ ಹೇಗೆ ಕಲಿಸುತ್ತದೆ?

22 ಅನ್ಯಾಯ ತುಂಬಿರುವ ಇಂದಿನ ಜಗತ್ತಿನಲ್ಲಿ ಯಾವತ್ತೂ ನ್ಯಾಯ ಸಿಗುವುದಿಲ್ಲವೆಂಬ ಯೋಚನೆ ಬರುವುದು ಸಹಜ. ನಿಮಗೆಂದಾದರೂ ಹಾಗೆ ಅನಿಸಿದೆಯೇ? ಎಸ್ತೇರಳಾದರೊ ಹತಾಶಳಾಗಲಿಲ್ಲ. ಯಾರಲ್ಲೂ ಭರವಸೆಯಿಡಲಾಗುವುದಿಲ್ಲ ಎಂಬ ಸಿನಿಕತನ ತಾಳಲಿಲ್ಲ. ನಂಬಿಕೆ ಕಳಕೊಳ್ಳಲಿಲ್ಲ. ಸಮಯ ಬಂದಾಗ ನ್ಯಾಯದ ಪರವಹಿಸಿ ಧೈರ್ಯದಿಂದ ಮಾತಾಡಿದಳು. ಮುಂದಿನದ್ದನ್ನು ಯೆಹೋವನು ಮಾಡುವನೆಂದು ಆತನಲ್ಲಿ ಭರವಸೆಯಿಟ್ಟಳು. ನಾವೂ ಹಾಗೆಯೇ ಮಾಡೋಣ. ಯೆಹೋವನು ಎಸ್ತೇರಳ ದಿನದಲ್ಲಿ ಹೇಗಿದ್ದನೊ ಇಂದು ಕೂಡ ಹಾಗೆಯೇ ಇದ್ದಾನೆ, ಬದಲಾಗಿಲ್ಲ. ಹಾಮಾನನಿಗೆ ಮಾಡಿದಂತೆ ಈಗಲೂ ಆತನು ದುಷ್ಟ ಹಾಗೂ ಕುಟಿಲ ಜನರು ತಮ್ಮ ಬಲೆಯಲ್ಲಿ ತಾವೇ ಸಿಕ್ಕಿಬೀಳುವಂತೆ ಮಾಡಬಲ್ಲನು.ಕೀರ್ತನೆ 7:11-16 ಓದಿ.

ಯೆಹೋವನಿಗಾಗಿ, ಆತನ ಜನರಿಗಾಗಿ ನಿಸ್ವಾರ್ಥದಿಂದ ಕ್ರಮಗೈದಳು

23. (1) ರಾಜನು ಮೊರ್ದೆಕೈ ಮತ್ತು ಎಸ್ತೇರಳಿಗೆ ಯಾವ ಪ್ರತಿಫಲ ಕೊಟ್ಟ? (2) ಯಾಕೋಬನು ಮರಣಶಯ್ಯೆಯಲ್ಲಿದ್ದಾಗ ಬೆನ್ಯಾಮೀನನ ಕುರಿತು ನುಡಿದ ಪ್ರವಾದನೆ ಹೇಗೆ ನೆರವೇರಿತು? (“ ಪ್ರವಾದನೆಯ ನೆರವೇರಿಕೆ” ಚೌಕ ನೋಡಿ.)

23 ಕೊನೆಗೂ ರಾಜ ಅಹಷ್ವೇರೋಷನಿಗೆ ಮೊರ್ದೆಕೈ ಯಾರೆಂದು ಗೊತ್ತಾಯಿತು. ಅವನು ತನ್ನನ್ನು ಹತ್ಯೆಯಿಂದ ಬಚಾವು ಮಾಡಿದವನು ಮಾತ್ರವಲ್ಲ, ಎಸ್ತೇರಳ ಸಾಕುತಂದೆಯೂ ಆಗಿದ್ದನೆಂದು ತಿಳಿದುಕೊಂಡ. ಹಾಮಾನನ ಹುದ್ದೆಯನ್ನು ಮೊರ್ದೆಕೈಗೆ ಕೊಟ್ಟು ಅವನನ್ನು ಪ್ರಧಾನ ಮಂತ್ರಿಯನ್ನಾಗಿ ಮಾಡಿದ. ಹಾಮಾನನ ಮನೆಯನ್ನು, ಅಪಾರ ಧನಸಂಪತನ್ನು ಎಸ್ತೇರಳಿಗೆ ಕೊಟ್ಟ. ಎಸ್ತೇರಳು ಇದೆಲ್ಲದರ ಉಸ್ತುವಾರಿಯನ್ನು ಮೊರ್ದೆಕೈಗೆ ವಹಿಸಿಕೊಟ್ಟಳು.—ಎಸ್ತೇ. 8:1, 2.

24, 25. (1) ಹಾಮಾನನ ಕುತಂತ್ರವನ್ನು ಬಯಲಿಗೆಳೆದ ನಂತರ ಎಸ್ತೇರ್‌ ಏಕೆ ಸುಮ್ಮನೆ ಕೂರಲಿಲ್ಲ? (2) ಎಸ್ತೇರ್‌ ಪುನಃ ತನ್ನ ಜೀವವನ್ನು ಅಪಾಯಕ್ಕೊಡ್ಡಿದ್ದು ಹೇಗೆ?

24 ಎಸ್ತೇರ್‌ ಈಗ ತನಗೂ ಮೊರ್ದೆಕೈಗೂ ಜೀವಾಪಾಯ ತಪ್ಪಿತ್ತೆಂದು ಸುಮ್ಮನೆ ಕೂತಳೊ? ಅವಳು ಸ್ವಾರ್ಥಿಯಾಗಿರುತ್ತಿದ್ದರೆ ಹಾಗೆ ಮಾಡುತ್ತಿದ್ದಳು. ಆದರೆ ಅವಳು ಅಂಥವಳಾಗಿರಲಿಲ್ಲ. ಎಲ್ಲ ಯೆಹೂದ್ಯರನ್ನು ಸಂಹರಿಸಬೇಕೆಂದು ಹಾಮಾನನು ಹೊರಡಿಸಿದ್ದ ಆಜ್ಞೆ ಅದೇ ಸಮಯದಲ್ಲಿ ಸಾಮ್ರಾಜ್ಯದ ಮೂಲೆಮೂಲೆಗೂ ತಲಪುತ್ತಾ ಇತ್ತು. ಈ ಕ್ರೂರವಾದ ವಧೆಗಾಗಿ ಹಾಮಾನನು ಒಂದು ವಿಧದ ಮಾಟಮಂತ್ರವಾದ ಪೂರ್‌ ಅಂದರೆ ಚೀಟನ್ನು ಹಾಕಿಸಿ ದಿನವನ್ನೂ ನಿಶ್ಚಯಪಡಿಸಿದ್ದ. (ಎಸ್ತೇ. 9:24-26) ಆ ದಿನಕ್ಕೆ ಇನ್ನೂ ಕೆಲವು ತಿಂಗಳಿದ್ದವಾದರೂ ಅದು ವೇಗವಾಗಿ ಧಾವಿಸಿ ಬರುತ್ತಾ ಇತ್ತು. ಆ ಆಪತ್ತನ್ನು ತಪ್ಪಿಸುವ ಸಾಧ್ಯತೆ ಇತ್ತೇ?

25 ಎಸ್ತೇರ್‌ ನಿಸ್ವಾರ್ಥದಿಂದ ಪುನಃ ತನ್ನ ಪ್ರಾಣವನ್ನು ಅಪಾಯಕ್ಕೊಡ್ಡಿದಳು. ರಾಜನ ಅಪ್ಪಣೆಯಿಲ್ಲದೆ ಅವನ ಸನ್ನಿಧಾನಕ್ಕೆ ಮತ್ತೊಮ್ಮೆ ಹೋದಳು. ಈ ಸಲವಂತೂ ತನ್ನ ಜನರಿಗಾಗಿ ಕಣ್ಣೀರು ಸುರಿಸುತ್ತಾ, ಆ ಘೋರ ಆಜ್ಞೆಯನ್ನು ಹಿಂದೆಗೆಯುವಂತೆ ಗಂಡನ ಬಳಿ ಅಂಗಲಾಚಿದಳು. ಆದರೆ ಪರ್ಷಿಯದ ರಾಜನ ಹೆಸರಿನಲ್ಲಿ ಒಮ್ಮೆ ಒಂದು ಆಜ್ಞೆ ಹೊರಡಿಸಲ್ಪಟ್ಟರೆ ಅದನ್ನು ಯಾವ ಕಾರಣಕ್ಕೂ ಹಿಂದೆಗೆಯಬಾರದೆಂಬ ಪದ್ಧತಿಯಿತ್ತು. (ದಾನಿ. 6:12, 15) ಆದ್ದರಿಂದ ಒಂದು ಹೊಸ ಆಜ್ಞೆಯನ್ನು ಜಾರಿಗೆ ತರಲು ರಾಜನು ಎಸ್ತೇರ್‌ ಹಾಗೂ ಮೊರ್ದೆಕೈಗೆ ಅಧಿಕಾರ ಕೊಟ್ಟ. ಈ ಎರಡನೆಯ ಆಜ್ಞೆ ಪ್ರಕಾರ ಯೆಹೂದ್ಯರು ತಮ್ಮ ಪ್ರಾಣರಕ್ಷಣೆಗಾಗಿ ಹೋರಾಡಬಹುದಿತ್ತು. ಈ ಒಳ್ಳೇ ಸುದ್ದಿಯನ್ನು ಸಾಮ್ರಾಜ್ಯದ ಪ್ರತಿಯೊಂದು ಭಾಗದಲ್ಲಿದ್ದ ಯೆಹೂದ್ಯರಿಗೆ ತಲಪಿಸಲು ಕುದುರೆಸವಾರರು ದೌಡಾಯಿಸಿದರು. ಈಗ ಯೆಹೂದ್ಯರ ಹೃದಯದಲ್ಲಿ ಆಶಾಕಿರಣ ಮೂಡಿತು. (ಎಸ್ತೇ. 8:3-16) ಆ ವಿಶಾಲ ಸಾಮ್ರಾಜ್ಯದಾದ್ಯಂತ ಯೆಹೂದ್ಯರು ಶಸ್ತ್ರಸಜ್ಜಿತರಾಗಿ, ಹೋರಾಟಕ್ಕೆ ಸಿದ್ಧರಾಗುವುದನ್ನು ಊಹಿಸಿಕೊಳ್ಳಿ. ಇದೆಲ್ಲ ಸಾಧ್ಯವಾದದ್ದು ಆ ಹೊಸ ಆಜ್ಞೆಯಿಂದ. ಆದರೆ ಪ್ರಶ್ನೆಯೇನೆಂದರೆ, ‘ಸೇನಾಧೀಶ್ವರನಾದ ಯೆಹೋವನು’ ಆತನ ಜನರ ಸಂಗಡ ಇರುವನೇ?—1 ಸಮು. 17:45.

ಪರ್ಷಿಯದ ಸಾಮ್ರಾಜ್ಯದಲ್ಲಿದ್ದ ಯೆಹೂದ್ಯರಿಗೆಲ್ಲ ಎಸ್ತೇರ್‌ ಹಾಗೂ ಮೊರ್ದೆಕೈ ಹೊಸ ಆಜ್ಞೆ ಕಳುಹಿಸಿದರು

26, 27. (1) ಯೆಹೋವನು ತನ್ನ ಜನರಿಗೆ ಶತ್ರುಗಳ ಮೇಲೆ ಕೊಟ್ಟ ವಿಜಯವು ಎಷ್ಟು ಮಹತ್ತರವೂ ಸಂಪೂರ್ಣವೂ ಆಗಿತ್ತು? (2) ಹಾಮಾನನ ಪುತ್ರರ ನಾಶನದಿಂದಾಗಿ ಯಾವ ಪ್ರವಾದನೆ ನೆರವೇರಿತು?

26 ಹಾಮಾನನು ನಿಶ್ಚಯಿಸಿದ್ದ ದಿನ ಬಂದಾಗ ದೇವಜನರು ಸಿದ್ಧರಾಗಿದ್ದರು. ಈಗಂತೂ ಪರ್ಷಿಯದ ಅನೇಕ ಅಧಿಕಾರಿಗಳೂ ಅವರ ಪಕ್ಷದಲ್ಲಿದ್ದರು. ಏಕೆಂದರೆ ಯೆಹೂದ್ಯನಾದ ಮೊರ್ದೆಕೈ ಹೊಸ ಪ್ರಧಾನ ಮಂತ್ರಿ ಎಂಬ ಸುದ್ದಿ ದೂರ ದೂರದ ವರೆಗೂ ಹಬ್ಬಿತ್ತು. ಯೆಹೋವನು ತನ್ನ ಜನರಿಗೆ ಮಹಾ ವಿಜಯವನ್ನು ಕೊಟ್ಟನು. ಶತ್ರುಗಳು ಮತ್ತೆಂದೂ ತನ್ನ ಜನರಿಗೆ ಹಾನಿಮಾಡದಂತೆ ಅವರು ಪೂರ್ತಿ ಸೋಲುಣ್ಣುವ ಹಾಗೆ ಮಾಡಿದನು. *ಎಸ್ತೇ. 9:1-6.

27 ಅಲ್ಲದೆ, ದುಷ್ಟ ಹಾಮಾನನ ಪುತ್ರರು ಜೀವದಿಂದಿರುವಂತೆ ಬಿಟ್ಟರೆ ಅವನ ಮನೆ ಮೇಲೆ ಉಸ್ತುವಾರಿ ಮಾಡುವ ಮೊರ್ದೆಕೈಯ ಜೀವಕ್ಕೆ ಅಪಾಯವಿರುತ್ತಿತ್ತು ಖಂಡಿತ. ಹಾಗಾಗಿ ಹಾಮಾನನ ಪುತ್ರರನ್ನೂ ಸಂಹರಿಸಲಾಯಿತು. (ಎಸ್ತೇ. 9:7-10) ಹೀಗೆ ಒಂದು ಬೈಬಲ್‌ ಪ್ರವಾದನೆ ನೆರವೇರಿತು. ತನ್ನ ಜನರ ಶತ್ರುಗಳಾಗಿದ್ದ ಅಮಾಲೇಕ್ಯರು ಪೂರ್ತಿಯಾಗಿ ನಾಶವಾಗಿ ಹೋಗುವರೆಂದು ದೇವರು ಎಷ್ಟೋ ಮುಂಚೆ ನುಡಿದಂತೆಯೇ ಆಯಿತು. (ಧರ್ಮೋ. 25:17-19) ದೇವರ ಖಂಡನೆಗೊಳಗಾಗಿದ್ದ ಆ ಜನಾಂಗದಲ್ಲಿ ಕೊನೆಗೆ ಉಳಿದವರ ಪೈಕಿ ಬಹುಶಃ ಹಾಮಾನನ ಪುತ್ರರಿದ್ದರು.

28, 29. (1) ಎಸ್ತೇರ್‌ ಮತ್ತವಳ ಜನರು ಹೋರಾಟದಲ್ಲಿ ಒಳಗೂಡಬೇಕೆಂಬುದು ಯೆಹೋವನ ಚಿತ್ತವಾಗಿತ್ತು ಏಕೆ? (2) ಎಸ್ತೇರಳ ಮಾದರಿ ನಮಗಿಂದು ಪ್ರಯೋಜನಕರವೇಕೆ?

28 ಯುವ ಪ್ರಾಯದ ಎಸ್ತೇರಳು ಯುದ್ಧ ಹಾಗೂ ಸಂಹಾರಕ್ಕೆ ಸಂಬಂಧಪಟ್ಟ ರಾಜಾಜ್ಞೆಗಳನ್ನು ಹೊರಡಿಸುವಂಥ ಭಾರವಾದ ಹೊರೆಯನ್ನು ಹೊರಬೇಕಾಯಿತು. ಅದು ಸುಲಭವಾಗಿರಲಿಲ್ಲವಾದರೂ ಅದನ್ನು ಮಾಡಿದಳು. ದೇವಜನರಾದ ಇಸ್ರಾಯೇಲ್ಯರನ್ನು ನಾಶನದಿಂದ ಪಾರುಮಾಡಬೇಕೆಂಬುದು ಯೆಹೋವನ ಚಿತ್ತವಾಗಿತ್ತು. ಏಕೆಂದರೆ ಆ ಜನಾಂಗದಿಂದಲೇ ಇಡೀ ಮಾನವಕುಲಕ್ಕೆ ನಿರೀಕ್ಷೆಯ ಏಕೈಕ ಮೂಲನಾದ ವಾಗ್ದತ್ತ ಮೆಸ್ಸೀಯನು ಹುಟ್ಟಿಬರಲಿದ್ದನು. (ಆದಿ. 22:18) ಇಂದಿರುವ ದೇವರ ಸೇವಕರಾದರೊ ಯಾವುದೇ ಸಂಘರ್ಷ, ಯುದ್ಧಗಳಲ್ಲಿ ಪಾಲ್ಗೊಳ್ಳುವುದಿಲ್ಲ. ಏಕೆಂದರೆ ಮೆಸ್ಸೀಯನಾದ ಯೇಸು ಭೂಮಿಗೆ ಬಂದಾಗ ತನ್ನ ಹಿಂಬಾಲಕರು ಶಸ್ತ್ರಗಳನ್ನು ಕೈಗೆತ್ತಿಕೊಳ್ಳುವುದನ್ನು ನಿಷೇಧಿಸಿದನು.—ಮತ್ತಾ. 26:52.

29 ಆದರೆ ಕ್ರೈಸ್ತರು ಆಧ್ಯಾತ್ಮಿಕ ಯುದ್ಧದಲ್ಲಿ ಪಾಲ್ಗೊಳ್ಳುತ್ತಾರೆ. ಯೆಹೋವ ದೇವರಲ್ಲಿ ನಮಗಿರುವ ನಂಬಿಕೆಯನ್ನು ನಾಶಮಾಡಲು ಸೈತಾನನು ಹಿಂದೆಂದಿಗಿಂತಲೂ ಈಗ ಹೆಚ್ಚು ಕಾರ್ಯೋನ್ಮುಖನಾಗಿದ್ದಾನೆ. (2 ಕೊರಿಂಥ 10:3, 4 ಓದಿ.) ಹಾಗಾಗಿ ಎಸ್ತೇರಳ ಮಾದರಿ ನಮಗಿರುವುದು ನಿಜಕ್ಕೂ ಪ್ರಯೋಜನಕರ. ಧೈರ್ಯದಿಂದಿರುವ ಮೂಲಕ, ಒಡಂಬಡಿಸುವ ಕಲೆಯನ್ನು ವಿವೇಕ ಹಾಗೂ ತಾಳ್ಮೆಯಿಂದ ಬಳಸುವ ಮೂಲಕ, ನಿಸ್ವಾರ್ಥದಿಂದ ದೇವಜನರನ್ನು ಬೆಂಬಲಿಸಲು ಸಿದ್ಧಮನಸ್ಸಿನವರಾಗಿರುವ ಮೂಲಕ ಎಸ್ತೇರಳಂತೆ ನಮ್ಮ ನಂಬಿಕೆಯನ್ನು ತೋರಿಸೋಣ.

^ ಪ್ಯಾರ. 26 ಯೆಹೂದ್ಯರು ಶತ್ರುಗಳನ್ನು ಪೂರ್ತಿಯಾಗಿ ಸೋಲಿಸಲು ರಾಜನು ಅವರಿಗೆ ಇನ್ನೊಂದು ದಿನ ಕೊಟ್ಟನು. (ಎಸ್ತೇ. 9:12-14) ಆ ವಿಜಯವನ್ನು ಯೆಹೂದ್ಯರು ಇವತ್ತಿಗೂ ಪ್ರತಿ ವರ್ಷ ಎಡಾರ್‌ ತಿಂಗಳಿನಲ್ಲಿ ಆಚರಿಸುತ್ತಾರೆ. ಈ ತಿಂಗಳು ನಮ್ಮ ಕ್ಯಾಲೆಂಡರಿನಲ್ಲಿ ಫೆಬ್ರವರಿ ತಿಂಗಳ ಕೊನೆ ಭಾಗದಿಂದ ಹಿಡಿದು ಮಾರ್ಚ್‌ ತಿಂಗಳ ಆರಂಭ ಭಾಗದ ವರೆಗೆ ಇರುತ್ತದೆ. ಈ ಹಬ್ಬದ ಹೆಸರು ಪ್ಯೂರಿಮ್‌. ಏಕೆಂದರೆ ಇಸ್ರಾಯೇಲ್ಯರನ್ನು ನಾಶಮಾಡಲಿಕ್ಕಾಗಿ ಹಾಮಾನನು ಪೂರ್‌ ಅಥವಾ ಚೀಟಿ ಹಾಕಿದ್ದನು.